[1]ಮಂಗಳೂರು: ಕಾಂಪೋಸ್ಟ್ ಪೈಪ್ ಖರೀದಿಯಲ್ಲಿ ಹಣ ದುರುಪಯೋಗ ಆರೋಪದ ಸಂಬಂಧ ದಕ್ಷಿಣ ಕನ್ನಡ ಜಿಲ್ಲೆಯ 6 ಗ್ರಾಮ ಪಂಚಾಯತ್ಗಳ ಅಧ್ಯಕ್ಷರು, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹಾಗೂ ಸ್ವಚ್ಛತಾ ಆಂದೋಲನದ ಜಿಲ್ಲಾ ನೋಡಲ್ ಅಧಿಕಾರಿ ವಿರುದ್ಧ ಭ್ರಷ್ಟಾಚಾರ ನಿಗ್ರಹ ದಳವು ಜಿಲ್ಲಾ ಠಾಣೆಯಲ್ಲಿ ಶುಕ್ರವಾರ ಪ್ರಕರಣ ದಾಖಲಿಸಿದೆ.
ಪುತ್ತೂರು ತಾಲೂಕು ಕೋಡಿಂಬಾಡಿ ಗ್ರಾಮ ಪಂಚಾಯತಿಯಲ್ಲಿ 2015-16ನೇ ಸಾಲಿನಲ್ಲಿ ಕಾಂಪೋಸ್ಟ್ ಪೈಪ್ ಖರೀದಿಯಲ್ಲಿ ಹಣ ದುರುಪಯೋಗದ ಆರೋಪದಲ್ಲಿ ಗ್ರಾ.ಪಂ. ಅಧ್ಯಕ್ಷೆ ಸಂಧ್ಯಾ ರಾಮಚಂದ್ರ, ನಿವೃತ್ತ ಪಂಚಾಯತ್ ಅಭಿವೃದ್ಧಿ ಅಧಿಕಾರಿ ದಾಮೋದರ ಗೌಡ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ನ ಸಂಪೂರ್ಣ ಸ್ವಚ್ಛತಾ ಅಂದೋಲನ ನೋಡಲ್ ಅಧಿಕಾರಿ ಆಗಿದ್ದ ರೋಹಿತ್ ಎ.ಆರ್. ಮೇಲೆ ಪ್ರಕರಣ ದಾಖಲಾಗಿದೆ.
ಸುಳ್ಯ ತಾಲೂಕು ಜಾಲ್ಸೂರು ಗ್ರಾಮ ಪಂಚಾಯತಿಯಲ್ಲಿ 2015-16ನೇ ಸಾಲಿನಲ್ಲಿ ಆದ ದುರುಪಯೋಗದ ಪ್ರಕರಣದಲ್ಲಿ ಗ್ರಾ.ಪಂ. ಅಧ್ಯಕ್ಷೆ ಶಶಿಕಲಾ ಎಸ್. ನಾಯಕ್, ಪಿಡಿಓ ಶೀನ. ಎ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ನ ಸಂಪೂರ್ಣ ಸ್ವಚ್ಛತಾ ಅಂದೋಲನಾದ ನೋಡಲ್ ಅಧಿಕಾರಿ ಆಗಿದ್ದ ರೋಹಿತ್ ಎ.ಆರ್. ಮೇಲೆ ಕೇಸ್ ದಾಖಲಾಗಿದೆ.
ಪುತ್ತೂರು ತಾಲೂಕು ಆರ್ಯಾಪು ಗ್ರಾಪಂನಲ್ಲಿ 2015-16ನೇ ಸಾಲಿನಲ್ಲಿ ಆದ ದುರುಪಯೋಗದ ಪ್ರಕರಣದಲ್ಲಿ ಗ್ರಾಪಂ ಅಧ್ಯಕ್ಷೆ ಗೀತಾ, ಪಿಡಿಓ ಜಗದೀಶ್, ಮತ್ತು ಜಿಪಂ ಸಂಪೂರ್ಣ ಸ್ವಚ್ಛತಾ ಅಂದೋಲನ ನೋಡಲ್ ಅಧಿಕಾರಿ ಆಗಿದ್ದ ರೋಹಿತ್ ಎ.ಆರ್. ಮೇಲೆ ಪ್ರಕರಣ ದಾಖಲಿಸಲಾಗಿದೆ.
ಪುತ್ತೂರು ತಾಲೂಕು ಬಿಳಿನೆಲೆ ಗ್ರಾಪಂ ಅಧ್ಯಕ್ಷೆ ಶಾರದಾ.ಟಿ, ಪಿಡಿಓ ಸರೋಜಾ, (ಹಾಲಿ: ಕನಕ ಮಜಲು ಗ್ರಾಪಂ), ಗ್ರಾಪಂ ಕಾರ್ಯದರ್ಶಿ ರಮೇಶ.ಪಿ (ಹಾಲಿ: ಮಂಡೆಕೋಲು ಗ್ರಾಮ ಪಂಚಾಯತ್) ಮತ್ತು ಜಿಪಂ ಸಂಪೂರ್ಣ ಸ್ವಚ್ಛತಾ ಅಂದೋಲನದ ನೋಡಲ್ ಅಧಿಕಾರಿಯಾಗಿದ್ದ ರೋಹಿತ್ ಎ.ಆರ್.ರವರ ಮೇಲೆ ಪ್ರಕರಣ ದಾಖಲಿಸಲಾಗಿದೆ.
ಪುತ್ತೂರು ತಾಲೂಕು ಕೊರ್ಲ ಗ್ರಾಪಂ ಅಧ್ಯಕ್ಷೆ ಮೀನಾಕ್ಷಿ.ಬಿ, ಪಿಡಿಓ ಚಿತ್ರಾವತಿ, (ಹಾಲಿ: ಪಿಡಿಓ ಕೊರ್ಲ ಗ್ರಾಪಂ) ಮತ್ತು ನೋಡಲ್ ಅಧಿಕಾರಿ ಆಗಿದ್ದ ರೋಹಿತ್ ಎ.ಆರ್. ಮೇಲೆ ಪ್ರಕರಣ ದಾಖಲಾಗಿದೆ.
ಪುತ್ತೂರು ತಾಲೂಕು ಪೆರಾಬೆ ಗ್ರಾಪಂ ಅಧ್ಯಕ್ಷೆ ಬೇಬಿ.ಸಿ ಪಾಟಾಳಿ, ಪಿಡಿಓ ಜಿ.ಡಿ ಲಲಿತಾ ಮತ್ತು ನೋಡಲ್ ಅಧಿಕಾರಿ ಆಗಿದ್ದ ರೋಹಿತ್ ಎ.ಆರ್ ಮೇಲೆ ಪ್ರಕರಣ ದಾಖಲಾಗಿದೆ.
ಈ ಪ್ರಕರಣಗಳನ್ನು ಭ್ರಷ್ಟಾಚಾರ ನಿಗ್ರಹ ದಳ ಪಶ್ಚಿಮ ವಲಯದ ಆರಕ್ಷಕ ಅಧೀಕ್ಷಕಿ ಶ್ರುತಿ ಎನ್.ಎಸ್ ಮಾರ್ಗದರ್ಶನದಲ್ಲಿ ಭ್ರಷ್ಟಾಚಾರ ನಿಗ್ರಹ ದಳದ ಡಿವೈಎಸ್ಪಿ ಸುಧೀರ್ ಹೆಗಡೆ ದಾಖಲಿಸಿದ್ದಾರೆ. ಪೊಲೀಸ್ ಇನ್ಸ್ಪೆಕ್ಟರ್ ಮೋಹನ್ ಕೊಟ್ಟಾರಿ ತನಿಖೆ ನಡೆಸಿದ್ದಾರೆ. ಈ ಹಿಂದಿನ ಪೊಲೀಸ್ ಇನ್ಸ್ಪೆಕ್ಟರ್ ಯೋಗೀಶ್ ಕುಮಾರ್ ಈ ಪ್ರಕರಣಗಳ ವಿಚಾರಣೆ ನಡೆಸಿದ್ದರು.