[1]ಬೆಂಗಳೂರು: ನಮ್ಮ ನಾಯಕರ ಮೇಲೆ ಪದೇ ಪದೆ ಸರ್ಚ್ ವಾರೆಂಟ್ ತಂದು ದಾಳಿ ನಡೆಸುತ್ತಿರುವುದು ಖಂಡನೀಯ ಎಂದು ರಾಜ್ಯ ಒಕ್ಕಲಿಗರ ಸಂಘ ಆಕ್ರೋಶ ವ್ಯಕ್ತಪಡಿಸಿದೆ.
ನಗರದಲ್ಲಿ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದ ಸಂಘದ ಅಧ್ಯಕ್ಷ ಡಿ.ಎನ್. ಬೆಟ್ಟೇಗೌಡ, ಡಿಕೆಶಿ ಕುಟುಂಬದ ಮೇಲೆ ಕೇಂದ್ರ ಸರ್ಕಾರ ಇಲ್ಲ ಸಲ್ಲದ ಆರೋಪ ಮಾಡುತ್ತಿದೆ. ಚುನಾವಣೆಗೂ ಮೊದಲೇ ಇಡಿ, ಐಟಿ ದಾಳಿ ನಡೆಸಿದೆ. ಇದನ್ನು ನಮ್ಮ ಒಕ್ಕಲಿಗ ಜನಾಂಗದ ಖಂಡಿಸುತ್ತದೆ. ಸಮ್ಮಿಶ್ರ ಸರ್ಕಾರ ಮತ್ತು ಗುಜರಾತ್ ರಾಜ್ಯಸಭೆ ಚುನಾವಣೆ ವೇಳೆ ಡಿಕೆಶಿ ನಡೆದುಕೊಂಡ ರೀತಿಯಿಂದ ಈ ದಾಳಿಗಳು ನಡೆಯುತ್ತಿದೆ ಎಂದು ಆರೋಪಿಸಿದರು.
ವ್ಯಕ್ತಿಗತವಾಗಿ ದ್ವೇಷ ಸಾಧಿಸುವುದು ಸರಿಯಲ್ಲ. ಡಿಕೆಶಿ ಟಾರ್ಗೆಟ್ ಮಾಡುವುದು ಸರಿಯಲ್ಲ. ಉಪ ಚುನಾವಣೆಯಲ್ಲಿ ಬಿಜೆಪಿ ಸೋಲು ಕಂಡಿದೆ. ಹೀಗಾಗಿ ಡಿಕೆಶಿ ಗುರಿಯಾಗಿಸಿ ದಾಳಿ ನಡೆಸಿದರೆ ನಾವು ಮೇಲುಗೈ ಸಾಧಿಸಬಹುದೆಂಬ ಉದ್ದೇಶದಿಂದ ದಾಳಿ ನಡೆಸಲಾಗಿದೆ. ಇದು ರಾಜಕೀಯ ಪ್ರೇರಿತ ದಾಳಿ ಎಂಬುದು ಸ್ಪಷ್ಟವಾಗಿ ಗೊತ್ತಾಗುತ್ತದೆ ಎಂದು ಆರೋಪಿಸಿದರು.
ಬಿಜೆಪಿಯವರು ಶಾಸಕರಿಗೆ ಆಮಿಷ ಒಡ್ಡಿದ್ದಾರೆ. ಅವರ ಮೇಲೆ ಯಾಕೆ ದಾಳಿ ನಡೆಸಿಲ್ಲ. ಅದಕ್ಕೆ ದಾಖಲೆಗಳು ಕೂಡ ಇವೆ. ಬಿಜೆಪಿ ಹೀಗೆ ದಾಳಿ ಮುಂದುವರೆಸಿದರೆ ಈಗ 104 ಸ್ಥಾನ ಪಡೆದಿದೆ, ಮುಂದೆ ಕೇವಲ 4 ಸ್ಥಾನಕ್ಕೆ ಇಳಿಯಲಿದೆ. ನಮ್ಮ ಹೋರಾಟ ನಿಷ್ಠಾವಂತ ನಾಯಕನ ಮೇಲೆ ದಾಳಿ ನಡೆಸುತ್ತಿರುವವರ ವಿರುದ್ಧವಾಗಿದೆ ಎಂದು ಇದೇ ವೇಳೆ ಸ್ಪಷ್ಟಪಡಿಸಿದರು.
ವೈಯಕ್ತಿಕ ದುರುದ್ದೇಶಪೂರ್ವಕವಾಗಿ ದಾಳಿ ನಡೆದಿದೆ. ಬೇಕಿದ್ದರೆ ಇಂಥ ನಾಯಕರನ್ನು ಬೆಳೆಸಲಿ. ಅದನ್ನು ಬಿಟ್ಟು ದಾಳಿ ನಡೆಸಿ ಸಚಿವ ಸಂಪುಟದಲ್ಲಿ ಸ್ಥಾನ ಅಥವಾ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಅಡ್ಡಗಾಲು ಹಾಕುವ ಸಲುವಾಗಿ ಈ ರೀತಿ ದಾಳಿ ನಡೆಸುತ್ತಿರುವುದು ಸರಿಯಲ್ಲ ಎಂದು ಬೆಟ್ಟೇಗೌಡ ಆಕ್ಷೇಪ ವ್ಯಕ್ತಪಡಿಸಿದರು.