[1]ಬೆಂಗಳೂರು: ಬೆಂಗಳೂರಿನ ಮೂಲ ಸೌಕರ್ಯ ಅಭಿವೃದ್ಧಿ ಹಾಗೂ ಪರಿಣಾಮಕಾರಿ ತ್ಯಾಜ್ಯ ನಿರ್ವಹಣೆ ಕುರಿತು ಇನ್ಫೋಸಿಸ್ನ ಸ್ಥಾಪಕ ಎನ್.ಆರ್.ನಾರಾಯಣ ಮೂರ್ತಿ ಅವರು ಸದ್ಯದಲ್ಲೇ ತಮ್ಮ ಸಲಹೆಗಳನ್ನು ಮುಖ್ಯಮಂತ್ರಿಗಳಿಗೆ ನೀಡಲಿದ್ದಾರೆ.
ಬೆಂಗಳೂರಲ್ಲಿ ಇಂದು ಬೆಳಗ್ಗೆ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ನಾರಾಯಣಮೂರ್ತಿ ಅವರನ್ನು ಭೇಟಿಯಾಗಿ ಈ ಸಂಬಂಧ ಚರ್ಚಿಸಿದರು.
ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಬೆಂಗಳೂರಿನ ಅಭಿವೃದ್ಧಿ, ತ್ಯಾಜ್ಯ ನಿರ್ವಹಣೆ ಹಾಗೂ ಇನ್ನಿತರ ಮಹತ್ವದ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಸಮಿತಿ ರಚಿಸಲು ಮಾರ್ಗದರ್ಶನ ನೀಡುವಂತೆ ನಾರಾಯಣ ಮೂರ್ತಿ ಅವರನ್ನು ಕೋರಿದರು.
ಮುಖ್ಯಮಂತ್ರಿಗಳ ನೇತೃತ್ವದಲ್ಲಿಯೇ ರಚಿಸಲಾಗುವ ಈ ಸಮಿತಿ ಎರಡು ತಿಂಗಳಿಗೆ ಒಮ್ಮೆ ಸಭೆ ನಡೆಸಿ ಪ್ರಗತಿ ಪರಿಶೀಲನೆ ನಡೆಸುತ್ತದೆ. ಈ ಸಮಿತಿಯ ಭಾಗವಾಗಿರಲು ನನಗೆ ಹೆಮ್ಮೆ ಇದೆ ಎಂದ ನಾರಾಯಣ ಮೂರ್ತಿ, ಇನ್ನು ಎರಡು ತಿಂಗಳಲ್ಲಿ ತಮ್ಮ ಸಲಹೆಗಳನ್ನು ನೀಡುವುದಾಗಿ ಮುಖ್ಯಮಂತ್ರಿಗಳಿಗೆ ತಿಳಿಸಿದರು.
ನೀವು ಅಧಿಕಾರದಲ್ಲಿರುವಾಗ, ಇಲ್ಲದಿರುವಾಗಲೂ ನಿಮ್ಮ ಚಟುವಟಿಕೆಗಳನ್ನು ನಾನು ಹತ್ತಿರದಿಂದ ಗಮನಿಸುತ್ತಿದ್ದೇನೆ. ನೀವು ರಾಜ್ಯದ ಜನತೆಗೆ, ಕೃಷಿಕರಿಗಾಗಿ ಮಾಡುತ್ತಿರುವ ಕೆಲಸ ಶ್ಲಾಘನೀಯವಾಗಿದೆ. ಹೆಚ್ಡಿಕೆ ಇಸ್ರೇಲ್ಗೆ ಭೇಟಿ ನೀಡಿ ಕೃಷಿ ಪದ್ಧತಿಯ ಅಧ್ಯಯನ ನಡೆಸಿದ್ದರ ಬಗ್ಗೆಯೂ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ನಗರ ಅಭಿವೃದ್ಧಿ ಯೋಜನೆಗಳನ್ನು ರೂಪಿಸುವಂತಹ ಸಂದರ್ಭದಲ್ಲಿ ನಗರದ ಎನ್ಜಿಓಗಳನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುವಂತೆ ನಾರಾಯಣ ಮೂರ್ತಿ ಅವರು ಸಲಹೆ ನೀಡಿದರು.