[1]ಮಂಗಳೂರು: ರಾಜ್ಯದಲ್ಲಿ ಅಸ್ತಿತ್ವದಲ್ಲಿರುವುದು ಹಳಸಿದವರ ಮತ್ತು ಹಸಿದವರ ಸರ್ಕಾರ ಎಂದು ಬಿಜೆಪಿ ವಕ್ತಾರ ಸಿ ಟಿ ರವಿ ವ್ಯಂಗ್ಯವಾಡಿದ್ದಾರೆ.
ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿ.ಟಿ. ರವಿ, ಜನಾದೇಶ ಕಳೆದುಕೊಂಡ ಕಾಂಗ್ರೆಸ್ ಜೆಡಿಎಸ್ ಅಪವಿತ್ರ ಮೈತ್ರಿ ಮಾಡಿಕೊಂಡಿದೆ. ದೇಶದಲ್ಲಿ ಎಲ್ಲಾ ರಾಜಕೀಯ ಪಕ್ಷಗಳಿಗೆ ಮೋದಿ ಭಯ, ಮೋದಿ ಜ್ವರ ಶುರುವಾಗಿದೆ. ಅದಕ್ಕಾಗಿ ಬಿಜೆಪಿ ವಿರುದ್ದ ಎಲ್ಲಾ ಪಕ್ಷಗಳು ಒಟ್ಟಾಗುತ್ತಿದೆ.
ಶಿಕ್ಷಕ ಮತ್ತು ಪದವೀದರ ಕ್ಷೇತ್ರದ ವಿಧಾನಪರಿಷತ್ ಚುನಾವಣೆ ಯಲ್ಲಿ ಕಾಂಗ್ರೆಸ್, ಜೆಡಿಎಸ್ ಗುಂಡು ತುಂಡುಗಳ ಪಾರ್ಟಿ, ಹಣದ ಆಮೀಷ ಒಡ್ಡುತ್ತಿದೆ ಎಂದು ಸಿ.ಟಿ. ರವಿ ಹೇಳಿದರು.
ಬಾಗಲಕೋಟೆ ಹೊರತುಪಡಿಸಿ ಬಿ ಯಿಂದ ಆರಂಭವಾಗುವ ಐದು ಜಿಲ್ಲೆಗಳಲ್ಲಿ ನಿರೀಕ್ಷಿಸಿದ ಸ್ಥಾನ ಸಿಗಲಿಲ್ಲ. ಐದು ಬಿ ಜಿಲ್ಲೆಗಳಲ್ಲಿ ನಿರೀಕ್ಷಿತ ಸ್ಥಾನ ಪಡೆಯಲಾಗದೆ ಪಕ್ಷ ಅಧಿಕಾರಕ್ಕೆ ಬಂದಿಲ್ಲ. ಬೆಂಗಳೂರು, ಬಿಜಾಪುರ, ಬಳ್ಳಾರಿ, ಬೆಳಗಾಂ, ಬೀದರ್ ನಲ್ಲಿ ಹೆಚ್ಚಿನ ಸ್ಥಾನ ನಿರೀಕ್ಷೆ ಇತ್ತು. ಆದರೆ ಮತದಾರರು ಈ ಪ್ರದೇಶದಲ್ಲಿ ಬಿಜೆಪಿ ಕೈಹಿಡಿಯದ ಕಾರಣ ಪಕ್ಷಕ್ಕೆ ಸರಳ ಬಹುಮತ ಬರಲಿಲ್ಲ ಎಂದು ಹೇಳಿದರು.