[1]ಬೆಂಗಳೂರು: ನಾನು 8ನೇ ತರಗತಿ ವ್ಯಾಸಂಗ ಮಾಡಿದ್ದರೂ, ನಮ್ಮ ಮಕ್ಕಳಿಗೆ ಉನ್ನತ ವಿದ್ಯಾಭ್ಯಾಸ ಕೊಡಿಸಿದ್ದೇನೆ. ಹೀಗಾಗಿ ರಾಜ್ಯದ ವಿದ್ಯಾರ್ಥಿಗಳ ಉನ್ನತ ವಿದ್ಯಾಭ್ಯಾಸಕ್ಕೂ ಹೆಚ್ಚಿನ ಗಮನ ನೀಡುತ್ತೇನೆ ಎಂದು ಉನ್ನತ ಶಿಕ್ಷಣ ಸಚಿವ ಜಿ.ಟಿ. ದೇವೇಗೌಡರು ತಿಳಿಸಿದ್ದಾರೆ.
ವಿಧಾನಸೌಧದ ತಮ್ಮ ಕಚೇರಿ ಪ್ರವೇಶಿಸಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ಎಂಟನೇ ತರಗತಿ ವ್ಯಾಸಂಗ ಮಾಡಿದವರು ಉನ್ನತ ಶಿಕ್ಷಣ ಇಲಾಖೆ ನಿರ್ವಹಿಸುತ್ತಾರಾ ಎಂದು ಮಾಧ್ಯಮಗಳು ವರದಿ ಮಾಡಿದ್ದವು. ಅದನ್ನು ಯಶಸ್ವಿಯಾಗಿ ನಿರ್ವಹಿಸುವ ವಿಶ್ವಾಸವಿದೆ. ಇಂದು ಉನ್ನತ ಶಿಕ್ಷಣ ಇಲಾಖೆಯ ಖಾತೆಯ ಜವಾಬ್ದಾರಿ ವಹಿಸಿಕೊಂಡಿದ್ದೇನೆ. ಸಿಎಂ ಕುಮಾರಸ್ವಾಮಿ ಅವರು ನನ್ನ ಮೇಲೆ ಅಪಾರ ನಂಬಿಕೆ ಇಟ್ಟುಕೊಂಡಿದ್ದಾರೆ. ಸಮರ್ಥವಾಗಿ ಕಾರ್ಯನಿರ್ವಹಿಸುತ್ತಾರೆ ಎಂಬ ನಂಬಿಕೆ ಇಟ್ಟುಕೊಂಡು ಈ ಖಾತೆ ಕೊಟ್ಟಿದ್ದಾರೆ ಎಂದರು.
ಕಂದಾಯ ಮತ್ತು ಜಲಸಂಪನ್ಮೂಲ ಖಾತೆ ಕಾಂಗ್ರೆಸ್ಗೆ ಹೋದ ಹಿನ್ನೆಲೆ ಜೆಡಿಎಸ್ಗೆ ಬಂದ ಖಾತೆಯಲ್ಲಿ ಈ ಖಾತೆ ನೀಡಿದ್ದಾರೆ. ನಾನು ಗ್ರಾಮೀಣಾಭಿವೃದ್ಧಿ ಖಾತೆ ಬೇಕು ಎಂದು ಬಯಸಿದ್ದು ನಿಜ ಎಂದು ಇದೇ ವೇಳೆ ಜಿ. ಟಿ. ದೇವೇಗೌಡ ಸ್ಪಷ್ಟಪಡಿಸಿದರು.
ನಮ್ಮಲ್ಲಿ ಶೇ.25 ರಷ್ಟು ಮಾತ್ರ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆಯುತ್ತಾರೆ. ಹಳ್ಳಿಯ ಮಕ್ಕಳು ಉನ್ನತ ಶಿಕ್ಷಣ ಪಡೆಯಬೇಕು. ಇಲಾಖೆಯನ್ನು ಮತ್ತಷ್ಟು ಸದೃಢಗೊಳಿಸಬೇಕೆಂದು ಸಿಎಂ ಈ ಖಾತೆ ನೀಡಿದ್ದಾರೆ. ಪ್ರಾಮಾಣಿಕವಾಗಿ, ಯಶಸ್ವಿಯಾಗಿ ಈ ಖಾತೆ ನಿರ್ವಹಿಸಿ, ಗುಣಾತ್ಮಕ ಬದಲಾವಣೆ ತರಲು ಪ್ರಯತ್ನಿಸುತ್ತೇನೆ ಎಂದು ಜಿಟಿಡಿ ವಿಶ್ವಾಸ ವ್ಯಕ್ತಪಡಿಸಿದರು.
ಇಲಾಖೆಯಲ್ಲಿ ಬದಲಾವಣೆ, ಮಾರ್ಪಾಡು ಮಾಡಬೇಕಿದೆ. ವಿಶ್ವವಿದ್ಯಾಲಯಗಳು ನಗರ ಪ್ರದೇಶಕ್ಕೆ ಮಾತ್ರ ಸೀಮಿತ ಅಲ್ಲ, ಗ್ರಾಮೀಣ ಪ್ರದೇಶದಲ್ಲೂ ವಿಸ್ತರಿಸಬೇಕು. ವೃತ್ತಿಪರ ಶಿಕ್ಷಣ ನೀಡಿ ವಿದ್ಯಾರ್ಥಿಗಳಿಗೆ ಉದ್ಯೋಗ ನೀಡಬೇಕು. ಇನ್ಫೋಸಿಸ್ ಮಾದರಿಯಲ್ಲಿ ವಿದ್ಯಾರ್ಥಿಗಳಿಗೆ ತರಬೇತಿ ನೀಡುವಂತ ವ್ಯವಸ್ಥೆ ತರಬೇಕಿದೆ ಎಂದು ಸಚಿವರು ವಿವರಿಸಿದರು.