[1]ಮಂಗಳೂರು : ಕೇಂದ್ರ ಸರಕಾರದ ಸ್ಮಾರ್ಟ್ ಸಿಟಿ ಯೋಜನೆ 2022ರ ಮಾರ್ಚ್ ಅಂತ್ಯದೊಳಗೆ ಪೂರ್ಣಗೊಳ್ಳಲಿದ್ದು ಈ ಪ್ರಸ್ತಾವನೆ ಯಲ್ಲಿ 65 ಯೋಜನೆಗಳಿದ್ದು 4 ಕಾಮಗಾರಿಗಳು ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಿ ಕಾಮಗಾರಿ ಆರಂಭಿಸಲಾಗಿದೆ. ಎಂದು ಮಂಗಳೂರು ಮೇಯರ್ ಭಾಸ್ಕರ್ ಮೊಯ್ಲಿ ಹೇಳಿದರು.
ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಕಾವೂರು ದೇವಸ್ಥಾನ, ಆಕಾಶಭವನದಲ್ಲಿ ಸ್ಮಾರ್ಟ್ ಬಸ್ ತಂಗುದಾಣ, ಕ್ಲಾಕ್ಟವರ್ನಿಂದ ಎಬಿ ಶೆಟ್ಟಿ ವೃತ್ತದವರೆಗೆ ಸ್ಮಾರ್ಟ್ ರಸ್ತೆ, ನೆಲ್ಲಿಕಾಯಿ ರಸ್ತೆಯಲ್ಲಿ ಸ್ಮಾರ್ಟ್ ಒಳಚರಂಡಿ ವ್ಯವಸ್ಥೆ ಈ ಕಾಮಗಾರಿಗಳಾಗಿವೆ ಎಂದು ಮೇಯರ್ ಹೇಳಿದರು.
ಸ್ಮಾರ್ಟ್ ಸಿಟಿ ಅಭಿಯಾನದ ಕಂಪನಿಗಳ ಕಾಯ್ದೆ ಪ್ರಕಾರ ಎಸ್ಪಿವಿಯ ಆಡಳಿತ ನಿರ್ದೇಶಕರು ಹಾಗೂ ಮುಖೆಯ ಕಾರ್ಯ ನಿರ್ವಹಣಾಧಿಕಾರಿಯಾಗಿ ಪಾಲಿಕೆಯ ಆಯುಕ್ತರು ಹೆಚ್ಚುವರಿ ಪ್ರಭಾರದಲ್ಲಿ ಕಾರ್ಯ ನಿರ್ವಹಿಸಲಿದ್ದಾರೆ. ಅಧ್ಯಕ್ಷರಾಗಿ ದ.ಕ. ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಕಾರ್ಯ ನಿರ್ವಹಿಸಲಿದ್ದಾರೆ. ಮಹಾನಗರ ಪಾಲಿಕೆಯ ಮಹಾಪೌರರು ಮತ್ತು ಇತರ ಮೂರು ಮಂದಿ ಪಾಲಿಕೆಯ ಸದಸ್ಯರ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ.
ಎಸ್ಪಿವಿಗೆ ರಾಜ್ಯ ಹಾಗೂ ಕೇಂದ್ರ ಸರಕಾರದ ಒಟ್ಟು 215 ಕೋಟಿ ರೂ. ಅನುದಾನ ಬಿಡುಗಡೆಯಾಗಿದ್ದು, ಅದರಲ್ಲಿ 3.87 ಕೋಟಿ ರೂ. ವೆಚ್ಚವಾಗಿದೆ ಎಂದು ಮೇಯರ್ ಮಾಹಿತಿ ನೀಡಿದರು.
ಅಮೃತ್ ಯೋಜನೆಯಡಿ 185.52 ಕೋಟಿ ರೂ. ಅನುದಾನದಲ್ಲಿ 2 ಕೋಟಿ ರೂ.ಗಳಲ್ಲಿ ನಾಲ್ಕು ಪಾರ್ಕ್ಗಳ ಅಭಿವೃದ್ಧಿ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ. ಹೊಸಬೆಟ್ಟು, ಕುಂಜತ್ತಬೈಲು, ಕದ್ರಿ ಹಾಗೂ ಕಾಟಿಪಳ್ಳ ಪಾರ್ಕ್ಗಳ ಅಭಿವೃದ್ಧಿ ಕಾಮಗಾರಿ ನೆಯಲಿದೆ ಎಂದು ಮೇಯರ್ ತಿಳಿಸಿದರು.
ಮಳೆನೀರು ಚರಂಡಿಯ ಒಂದು ಕಾಮಗಾರಿ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ಕೆಲಸದ ಆದೇಶ ನೀಡಬೇಕಾಗಿದೆ. ಒಳಚರಂಡಿಯ ನಾಲ್ಕು ಪ್ಯಾಕೇಜ್ಗಳಲ್ಲಿ 1 ಪ್ಯಾಕೇಜ್ನ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡು ಕೆಲಸದ ಆದೇಶ ನೀಡಲಾಗಿದೆ ಎಂದವರು ಹೇಳಿದರು.
ಉಪ ಮೇಯರ್ ಮುಹಮ್ಮದ್ ಕೆ., ಸ್ಥಾಯಿ ಸಮಿತಿ ಅಧ್ಯಕ್ಷರಾದ ಪ್ರವೀಣ್ ಚಂದ್ರ ಆಳ್ವ, ನವೀನ್ ಡಿಸೋಜಾ, ಲತಾ ಸಾಲ್ಯಾನ್, ಆರೋಗ್ಯಾಧಿಕಾರಿ ಮಂಜಯ್ಯ ಶೆಟ್ಟಿ, ಪರಿಸರ ಅಧಿಕಾರಿ ಮಧು ಹಾಗೂ ದೀಪ್ತಿ ಉಪಸ್ಥಿತರಿದ್ದರು.