[1]ಮಂಗಳೂರು : ನಗರದ ಉರ್ವ ಮಾರಿಗುಡಿ ಬಳಿ ಗಾಂಜಾ ಮಾರಾಟ ಯತ್ನಿಸುತ್ತಿದ್ದ ನಾಲ್ವರನ್ನು ಪೊಲೀಸರು ಕಾರ್ಯಾಚರಣೆ ನಡೆಸಿದ ಬಂಧಿಸಿದ ಘಟನೆ ಭಾನುವಾರ ನಡೆದಿದೆ.
ಬಂಧಿತರನ್ನು ಉರ್ವದ ಮಾಡರ್ನ್ ರೈಸ್ಮಿಲ್ ಬಳಿ ಸಿಪಿಸಿ ಕಂಪೌಂಡ್ ನಿವಾಸಿ ಮಹೇಶ್ ಯಾನೆ ಮಾಚ (24), ಬೊಕ್ಕಪಟ್ಟಣ ರಸ್ತೆಯ ಮಠದಕಣಿಯ ರೀತೇಶ್ ಯಾನೆ ರೀತು (20), ಉರ್ವ ಲಾಂಗ್ಲೇನ್ ಬಳಿಯ ಸುದರ್ಶನ್ ಎಂ. ಯಾನೆ ಸುಧಾ (24), ಅಶೋಕ್ನಗರದ ಪಿ.ಕೆ. ಕಂಪೌಂಡ್ ಬಳಿಯ ರೀತೇಶ್ (21) ಎಂದು ಗುರುತಿಸಲಾಗಿದೆ.
ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಪೊಲೀಸರು, 1 ಕೆ.ಜಿ. 50 ಗ್ರಾಂ ಗಾಂಜಾ, 4 ಮೊಬೈಲ್ಗಳು ಮತ್ತು ನಗದನ್ನು ವಶಪಡಿಸಿ ಕೊಂಡಿದ್ದಾರೆ. ವಶಪಡಿಸಿಕೊಂಡ ಸೊತ್ತುಗಳ ಒಟ್ಟು ಮೌಲ್ಯ 55 ಸಾವಿರ ರೂ. ಎಂದು ಅಂದಾಜಿಸಲಾಗಿದೆ.
ನಗರ ಪೊಲೀಸ್ ಆಯುಕ್ತ ಟಿ.ಆರ್. ಸುರೇಶ್ ನಿರ್ದೇಶನದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ಹನುಮಂತರಾಯ, ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ಉಮಾ ಪ್ರಶಾಂತ್ ಹಾಗೂ ಕೇಂದ್ರ ಉಪವಿಭಾಗದ ಎಸಿಪಿ ಉದಯ ನಾಯಕ್ ಮಾರ್ಗದರ್ಶನದಲ್ಲಿ ಉರ್ವ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
ಈ ಕುರಿತು ಉರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.