- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ವಿಧಾನಸಭೆ ಉಪ ಸಭಾಧ್ಯಕ್ಷರಾಗಿ ಎಂ.ಕೃಷ್ಣಾರೆಡ್ಡಿ ಅವಿರೋಧ ಆಯ್ಕೆ

krishna-reddy [1]ಬೆಂಗಳೂರು: ವಿಧಾನಸಭೆ ಉಪ ಸಭಾಧ್ಯಕ್ಷರನ್ನಾಗಿ ಅವಿರೋಧವಾಗಿ ಆಯ್ಕೆ ಮಾಡಿದ ಸದನಕ್ಕೆ ನೂತನ ಉಪ ಸಭಾಧ್ಯಕ್ಷ ಎಂ.ಕೃಷ್ಣಾರೆಡ್ಡಿ ಅಭಿನಂದನೆ ಸಲ್ಲಿಸಿದರು.

ನೂತನ ಉಪ ಸಭಾಧ್ಯಕ್ಷರಾಗಿ ಆಯ್ಕೆಯಾದ ನಂತರ ಸಭಾನಾಯಕರು, ಹಲವು ಮಂದಿ ನಾಯಕರು ಹೇಳಿದ ಅಭಿನಂದನಾ ನುಡಿಗಳಿಗೆ ಪ್ರತಿಯಾಗಿ ಮಾತನಾಡಿದ ಕೃಷ್ಣಾರೆಡ್ಡಿ, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು, ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಉಪ ಮುಖ್ಯಮಂತ್ರಿ ಡಾ. ಜಿ.ಪರಮೇಶ್ವರ್ ಮತ್ತು ಶಾಸಕಾಂಗ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರ ಆಶೀರ್ವಾದದಿಂದ ಪ್ರತಿಪಕ್ಷದ ನಾಯಕರಾದ ಬಿ.ಎಸ್.ಯಡಿಯೂರಪ್ಪ ಅವರ ಸಹಕಾರದಿಂದ ಉಪ ಸಭಾಧ್ಯಕ್ಷನಾಗಿ ಆಯ್ಕೆಯಾಗಿದ್ದೇನೆ ಎಂದರು.

ಈ ಸ್ಥಾನಕ್ಕೆ ಎಷ್ಟು ಅರ್ಹನೋ ಗೊತ್ತಿಲ್ಲ. ಆದರೆ, ನನ್ನ ಕೆಲಸವನ್ನು ಪ್ರಾಮಾಣಿಕವಾಗಿ ನಿಭಾಯಿಸುತ್ತೇನೆ. ಅದರಲ್ಲೂ ಅತ್ಯಂತ ಹಿರಿಯ ಅನುಭವಿಯಾದ ನಿಮ್ಮ ಜತೆ ಕೆಲಸ ಮಾಡುವುದು ನನ್ನ ಸೌಭಾಗ್ಯ ಎಂದು ರಮೇಶ್‍ಕುಮಾರ್ ಅವರ ಕುರಿತು ಹೇಳಿದರು.

ಇದಕ್ಕೂ ಮುನ್ನ ಮಾತನಾಡಿದ್ದ ಸ್ಪೀಕರ್ ಕೆ.ಆರ್. ರಮೇಶ್‍ಕುಮಾರ್, ಸಾರ್ವಜನಿಕ ಜೀವನದಲ್ಲಿ ವಿಶ್ವಾಸ ಉಳಿಸಿಕೊಳ್ಳುವುದು ಬಹಳ ಮುಖ್ಯ. ವಿಶ್ವಾಸ ಉಳಿಸಿಕೊಳ್ಳದೆ ಸಾಸಿವೆ ಕಾಳಿನಷ್ಟು ಅನುಮಾನಗಳು ಬಂದರೂ ಇಲ್ಲಿ ಕೆಲಸ ಮಾಡಲು ಕಷ್ಟವಾಗುತ್ತದೆ. ಆತ್ಮತೃಪ್ತಿ ಇರುವುದಿಲ್ಲ ಎಂದು ಹಿತವಚನ ಹೇಳಿದರು.