- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಸೋತ ಶಾಸಕರಿಗೆ ಧೈರ್ಯ ತುಂಬಿದ ರಾಜ್ಯ ‘ಕೈ’ ನಾಯಕರು

dinesh-gundu-rao [1]ಬೆಂಗಳೂರು: ಶಾಸಕರ ಭವನದಲ್ಲಿ ಆಯೋಜಿಸಿದ್ದ ವಿಧಾನಸಭೆ ಚುನಾವಣೆಯಲ್ಲಿ ಪರಾಭವಗೊಂಡ ಅಭ್ಯರ್ಥಿಗಳ ಸಭೆಯಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾದ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಾ. ಜಿ.ಪರಮೇಶ್ವರ್, ಕೆಪಿಸಿಸಿ ನಿಯೋಜಿತ ಅಧ್ಯಕ್ಷ ದಿನೇಶ್ ಗುಂಡೂರಾವ್ ಭಾಗವಹಿಸಿದ್ದರು.

2008ರಲ್ಲಿ 88 ಸ್ಥಾನ ಗೆದ್ದು ಪ್ರತಿಪಕ್ಷದಲ್ಲಿ ಕುಳಿತಿದ್ದ ಕಾಂಗ್ರೆಸ್‍ 2013ರಲ್ಲಿ 122 ಸ್ಥಾನ ಗೆದ್ದು ಅಧಿಕಾರದ ಗದ್ದುಗೆ ಏರಿತ್ತು. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಐದು ವರ್ಷ ಪೂರ್ಣಗೊಳಿಸಿದ್ದರು. 2013-2018ರ ನಡುವೆ ಹಲವು ಭಾಗ್ಯಗಳನ್ನು ದಯಪಾಲಿಸಿದ್ದ ಸಿದ್ದರಾಮಯ್ಯ ಮತ್ತೆ ಅಧಿಕಾರಕ್ಕೆ ಬರುವ ಕನಸು ಕಂಡಿದ್ದರು. ಪಕ್ಷ ಕೂಡ ಅವರ ನೇತೃತ್ವದಲ್ಲಿ ಚುನಾವಣೆ ಎದುರಿಸಿತ್ತು. ಆದರೆ ಚುನಾವಣೆಯಲ್ಲಿ ಫಲಿತಾಂಶ ಉಲ್ಟಾ ಹೊಡೆದಿದೆ. ಕಾಂಗ್ರೆಸ್ ಮರಳಿ 78ಕ್ಕೆ ಕುಸಿದಿದೆ. ನಂತರ ನಡೆದ ಎರಡು ಸ್ಥಾನಗಳ ಚುನಾವಣೆಯಲ್ಲಿ ಜಯ ಗಳಿಸಿ 80 ಶಾಸಕರನ್ನು ಒಳಗೊಂಡಿದೆ.

ಶಾಸಕರ ಭವನ 2ರಲ್ಲಿ ಇಂದು ಮಹತ್ವದ ಸಭೆ ನಡೆಸಿದ ನಾಯಕರು ಸೋಲಿನ ಪರಾಮರ್ಶೆ ನಡೆಸಿದ್ದಾರೆ. ಪರಾಭವಗೊಂಡಿರುವ ಅಭ್ಯರ್ಥಿಗಳಲ್ಲಿ ಹುರುಪು ತುಂಬುವ ಕಾರ್ಯ ಮಾಡಿದ್ದಾರೆ. ಹಲವು ಪರಾಜಿತ ಶಾಸಕರು ಇದೇ ಸಂದರ್ಭ ಉಪಸ್ಥಿತರಿದ್ದು, ಕಡೆಯ ಸಂದರ್ಭದಲ್ಲಿ ಸರ್ಕಾರದ ಸಾಧನೆ ಪರಿಚಯಿಸುವ ಕಾರ್ಯ ವ್ಯವಸ್ಥಿತವಾಗಿ ಪಕ್ಷದಿಂದ ಆಗಿಲ್ಲ ಎಂದು ದೂರಿದರು.

ಎಲ್ಲರನ್ನೂ ಸಮಾಧಾನಿಸಿದ ನಾಯಕರು, ಮುಂದಿನ ಸ್ಥಳೀಯ ಸಂಸ್ಥೆ ಚುನಾವಣೆ ಹಾಗೂ ಲೋಕಸಭೆ ಚುನಾವಣೆಗೆ ಸಜ್ಜಾಗಿ. ಪಕ್ಷದ ಗೆಲುವಿಗೆ ಶ್ರಮಿಸಿ, ಪಕ್ಷ ನಿಮ್ಮ ಶ್ರಮವನ್ನು ಗುರುತಿಸಿದೆ. ಮುಂದಿನ ದಿನಗಳಲ್ಲಿ ನಿಮಗೆ ಸೂಕ್ತ ಸ್ಥಾನಮಾನ ನೀಡಿ ಗೌರವಿಸಲಿದೆ ಎಂಬ ಭರವಸೆ ನೀಡಿದರು.