[1]ಮಂಗಳೂರು: ಇಲ್ಲಿನ ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಕಚೇರಿ ಮುಂದೆ ನಿರ್ಮಿಸಲಾದ ಸಾರ್ವಜನಿಕ ಶೌಚಾಲಯವನ್ನು ಇನ್ನೂ ಉದ್ಘಾಟನೆ ಮಾಡಿಲ್ಲವೆಂದು ಆರೋಪಿಸಿರುವ ಕೆಲವರು, ಅಧಿಕಾರಿಗಳ ಅಣಕು ಅಂತಿಮ ಸಂಸ್ಕಾರ ಮಾಡುವ ಮೂಲಕ ಪ್ರತಿಭಟಿಸಿದರು.
ಪಿವಿಎಸ್ ಬಳಿಯಿರುವ ಬಿಜೆಪಿ ಕಚೇರಿಯ ಮುಂದೆ ಶೌಚಾಲಯದ ಕಾಮಗಾರಿ ಪೂರ್ಣಗೊಂಡಿದ್ದರೂ, ಇನ್ನೂ ಅದನ್ನು ಸಾರ್ವಜನಿಕ ಬಳಕೆಗೆ ಮುಕ್ತಗೊಳಿಸಲಾಗಿಲ್ಲ ಎಂದು ಆರೋಪಿಸಿದರು. ಸೌರಜ್ ಎಂಬುವರು ತಮ್ಮ ಫೇಸ್ಬುಕ್ನಲ್ಲಿ ಲೈವ್ ಆಗಿ ಶೌಚಾಲಯದ ಮುಂದೆ ಅಂತ್ಯಸಂಸ್ಕಾರ ನಡೆಸಿ, ಪ್ರತಿಭಟನೆ ವ್ಯಕ್ತಪಡಿಸಿದರು.
ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಶೌಚಾಲಯ ನಿರ್ಮಾಣ ಮಾಡಲಾಗಿದ್ದು, ಅಧಿಕಾರಿಗಳ ನಿರ್ಲಕ್ಷ್ಯದಿಂದ ಶೌಚಾಲಯದ ಬಳಕೆಯಾಗುತ್ತಿಲ್ಲ. ಜನಸಂಚಾರ ಇರುವ ಈ ಪ್ರದೇಶಗಳಲ್ಲಿ ಶೌಚಾಲಯ ಅಗತ್ಯ ವಿದ್ದರೂ, ಅದನ್ನು ಮುಕ್ತಗೊಳಿಸಿದೆ ಅಧಿಕಾರಿಗಳು ಮೌನವಾಗಿದ್ದಾರೆ. ಅವರು ಸತ್ತಿದ್ದಾರೆ ಎಂದು ಅಂತ್ಯಸಂಸ್ಕಾರ ಮಾಡಲಾಗುತ್ತಿದೆ. ಇನ್ನು ಒಂದು ವಾರದಲ್ಲಿ ಶೌಚಾಲಯವನ್ನು ಜನರ ಬಳಕೆಗೆ ಮುಕ್ತಗೊಳಿಸದಿದ್ದರೆ, ಸಂಬಂಧಿಸಿದ ಎಲ್ಲಾ ಅಧಿಕಾರಿಗಳಿಗೂ ಪಿಂಡ ಪ್ರದಾನ ಮಾಡಲಾಗುವುದು ಎಂದೂ ಅವರು ಎಚ್ಚರಿಸಿದರು.