- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಯಾರಿಗೇ ಆಗಲಿ ಒತ್ತಡ ಹೇರುವುದಕ್ಕೂ ಒಂದು ಲಿಮಿಟ್ ಇರುತ್ತದೆ: ಡಿ.ಕೆ.ಶಿವಕುಮಾರ್

d-k-shivkumar [1]ಬೆಂಗಳೂರು: ಸಿಎಂ ಕುಮಾರಸ್ವಾಮಿ ‌ಈಗಾಗಲೇ ಅಕ್ಕಿ ವಿತರಣೆಯ ವಿಚಾರ ಸ್ಪಷ್ಟಪಡಿಸಿದ್ದು,‌ 7 ಕೆಜಿ ಅಕ್ಕಿ ಕೊಡುವುದರಿಂದ 2,500 ಕೋಟಿ‌ ರೂ. ಹೊರೆಯಾಗುತ್ತದೆ. ಯಾರಿಗೇ ಆಗಲಿ ಒತ್ತಡ ಹೇರುವುದಕ್ಕೂ ಒಂದು ಲಿಮಿಟ್ ಇರುತ್ತದೆ ಎಂದು ಸಚಿವ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.

ತಮ್ಮ ನಿವಾಸ ಸದಾಶಿವ ನಗರದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, 2 ಕೆಜಿ‌ ಪಡಿತರ ಅಕ್ಕಿ ಖಡಿತ ಬಗ್ಗೆ ಸಿಎಂಗೆ ಸಿದ್ದರಾಮಯ್ಯ ಪತ್ರ ಬರೆದ ವಿಚಾರವಾಗಿ ಪ್ರತಿಕ್ರಿಯಿಸುತ್ತಾ ಈ ಹೇಳಿಕೆ ನೀಡಿದ್ದಾರೆ. ಆ ಮೂಲಕ ಸಿದ್ದರಾಮಯ್ಯಗೆ ಪರೋಕ್ಷವಾಗಿ ಡಿಕೆಶಿ ಟಾಂಗ್ ನೀಡಿದ್ದಾರೆ.

ಕೆಲವರು 7 ಕೆಜಿ ಅಕ್ಕಿ ಕೇಳಿದ್ದಾರೆ. ಇನ್ನು ಕೆಲವರು 5 ಕೆಜಿ ಕೇಳಿದ್ದಾರೆ. ಈ ಬಗ್ಗೆ ಇಂತ ಹಲವು ದ್ವಂದ್ವಗಳಿವೆ. ಯಾರೂ ಈ ಬಗ್ಗೆ ಗಾಬರಿ ಪಡಬೇಕಿಲ್ಲ. ಸಿದ್ದರಾಮಯ್ಯ ತಮ್ಮ ಅಭಿಪ್ರಾಯವನ್ನು ಪತ್ರದ ಮುಖೇನ ಹೇಳಿದ್ದಾರೆ. ಒಬ್ಬೊಬ್ಬರು ಒಂದೊಂದು ಅಭಿಪ್ರಾಯ ಹೇಳ್ತಾರೆ. ಕೆಲವರು ಬಜೆಟ್ನಲ್ಲಿ ಉತ್ತರ ಕರ್ನಾಟಕಕ್ಕೆ ಅನ್ಯಾಯ ಆಗಿದೆ ಎಂದಿದ್ದಾರೆ. ಹಾಗಂತ ಉತ್ತರ ಕರ್ನಾಟಕಕ್ಕೆ ನಿರ್ಲಕ್ಷ್ಯ ಆಗಿದೆಯಾ ಎಂದು ಪ್ರಶ್ನಿಸಿದರು.

ನೀರಾವರಿ ಇಲಾಖೆಯಲ್ಲಿ‌ ಕೇವಲ 2.5 ಕೋಟಿ ರೂ. ಮಾತ್ರ ಕಾವೇರಿ ಪ್ರದೇಶಾಭಿವೃದ್ಧಿಗೆ ನೀಡಲಾಗಿದೆ. ಉಳಿದದ್ದು ಉತ್ತರ ಕರ್ನಾಟಕಕ್ಕೇ ನೀಡಲಾಗಿದೆ. 371-ಜೆ ಅಡಿ ಹಣವನ್ನು ಬೇರೆ ಕಡೆ ಖರ್ಚು ಮಾಡಲು ಆಗುತ್ತಾ? ಸಲಹೆ ಕೊಡೋದು ತಪ್ಪಲ್ಲ. ಇದರಲ್ಲಿ ರಾಜಕಾರಣ ಸೃಷ್ಟಿ ಮಾಡೋದು ಸರಿಯಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಇದೇ ವೇಳೆ ಮಂಡ್ಯ ಲೋಕಸಭೆ ಚುನಾವಣೆ ವಿಚಾರವಾಗಿ ಮಾತನಾಡಿದ ಅವರು, ಈಗಾಗಲೇ ಕೆ.ಸಿ. ವೇಣುಗೋಪಾಲ್, ಡ್ಯಾನಿಷ್ ಅಲಿ ನೇತೃತ್ವದಲ್ಲಿ ಸಭೆ ಕರೆದು ತೀರ್ಮಾನ ಆಗಿದೆ. ಒಟ್ಟಿಗೆ ಲೋಕಸಭೆ ಚುನಾವಣೆಗೆ ಹೋಗ್ತೀವಿ ಎಂದಿದ್ದಾರೆ. ಆದರೆ, ಮಂಡ್ಯದಲ್ಲಿ ಯಾರಿಗೆ ಟಿಕೆಟ್ ಅನ್ನೋದು ನಿರ್ಧಾರ ಆಗಿಲ್ಲ. ಅದನ್ನ ಎಲ್ಲ ನಾಯಕರು ಕೂತು ಚರ್ಚೆ ಮಾಡಿ, ಬಳಿಕ ಮಾಧ್ಯಮಗಳ ಮುಂದೆ ಬರ್ತೀವಿ ಎಂದು ಸ್ಪಷ್ಟಪಡಿಸಿದರು.

ಕಾವೇರಿ ನದಿ ನೀರು ಹಂಚಿಕೆ ವಿಚಾರವಾಗಿ ಮಾತುಕತೆ ನಡೆಸಲು ಜು. 18ಕ್ಕೆ ದೆಹಲಿಯಲ್ಲಿ ಸಂಸದರ ಸಭೆ ಕರೆಯಲಾಗಿದೆ ಎಂದ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್, ಅದಕ್ಕಾಗಿ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಸ್ಪಷ್ಟಪಡಿಸಿದರು.

ಮುಖ್ಯಮಂತ್ರಿ ಕುಮಾರಸ್ವಾಮಿ ಜು. 18 ಕ್ಕೆ ದೆಹಲಿಗೆ ಹೋಗೋಣ ಅಂದಿದ್ದಾರೆ. ಅಂದು ದೆಹಲಿಯಲ್ಲಿ ಎಲ್ಲ ಸಂಸದರ ಸಭೆ ಕರೆಯಲಾಗಿದೆ. ಈ ರಾಜ್ಯದ ಹಿತ ಕಾಯಲು ಪಕ್ಷ ಭೇದ ಮರೆತು ಎಲ್ಲರೂ ಚರ್ಚೆ ಮಾಡುತ್ತೇವೆ. ಕಾವೇರಿ ವಿಚಾರದಲ್ಲಿ ನಮ್ಮ ಎಲ್ಲ ದಾಖಲೆಗಳನ್ನು ಸಲ್ಲಿಕೆ ಮಾಡುತ್ತೇವೆ ಎಂದು ತಿಳಿಸಿದರು.