- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಶಿರೂರು ಲಕ್ಷ್ಮೀವರ ತೀರ್ಥ ಸ್ವಾಮೀಜಿ ಆರೋಗ್ಯ ಸ್ಥಿತಿ ಗಂಭೀರ

shiroor swamiji [1]ಉಡುಪಿ : ಅಷ್ಟ ಮಠದ ವಿವಾದದಲ್ಲಿದ್ದ ಶಿರೂರು ಮಠದ ಶ್ರೀಲಕ್ಷ್ಮೀವರ ತೀರ್ಥ ಸ್ವಾಮೀಜಿ ಬುಧವಾರ ಬೆಳಗ್ಗೆ ಅಸ್ವಸ್ಥರಾಗಿ ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಸ್ವಾಮೀಜಿಗೆ ಹೊಟ್ಟೆನೋವು ಕಾಣಿಸಿಕೊಂಡಿದ್ದು, ವಿಪರೀತ ವಾಂತಿ ಮಾಡಿದ್ದಾರೆನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಸಂಜೆಯ ವರೆಗೆ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಸ್ವಾಮೀಜಿಯವರನ್ನು ಡಯಾಲಿಸಿಸ್ ಚಿಕಿತ್ಸೆಗೆ ಒಳಪಡಿಸಲಾಗಿದೆ ಎಂದು ಸ್ವಾಮೀಜಿಯ ಆಪ್ತವಲಯದವರು ತಿಳಿಸಿದ್ದಾರೆ.

ಸ್ವಾಮೀಜಿ ರಕ್ತ ವಾಂತಿ ಮಾಡುತ್ತಿದ್ದು, ರಕ್ತದೊತ್ತಡ ಮತ್ತು ಹೃದಯಬಡಿತ ಕಡಿಮೆಯಾಗಿದೆ ಎಂದು ತಿಳಿದು ಬಂದಿದೆ.

ಸ್ವಾಮೀಜಿ ಸೇವಿಸಿದ ಆಹಾರದಲ್ಲಿನ ವ್ಯತ್ಯಾಸದಿಂದ ಈ ರೀತಿ ಅನಾರೋಗ್ಯ ಉಂಟಾಗಿರುವುದಾಗಿ ವೈದ್ಯರು ತಿಳಿಸಿದ್ದಾರೆನ್ನಲಾಗಿದೆ. ಸದ್ಯ ಸ್ವಾಮೀಜಿಯ ಆರೋಗ್ಯ ಗಂಭೀರವಾಗಿದೆ ಎಂದು ತಿಳಿದುಬಂದಿದೆ.

ಸೋಮವಾರ ಶಿರೂರು ಮೂಲ ಮಠದಲ್ಲಿ ನಡೆದ ಕಾರ್ಯಕ್ರಮದ ಬಳಿಕ  ಸ್ವಾಮೀಜಿಯವರು ತೀವ್ರ ಅನಾರೋಗ್ಯದಿಂದ ಬಳಲುತ್ತಿ ದ್ದರು.