ಉಡುಪಿ : ಶೀರೂರು ಮಠದ ಲಕ್ಷ್ಮೀವರ ತೀರ್ಥ ಶ್ರೀ ಗಳ ಪಾರ್ಥೀವ ಶರೀರದ ಯಾತ್ರೆಯನ್ನು ಮಣಿಪಾಲ ಕೆಎಂಸಿ ಆಸ್ಪತ್ರೆಯಿಂದ ಉಡುಪಿ ಶ್ರೀಕೃಷ್ಣ ಮಠದವರೆಗೂ ಪುಷ್ಪಾಲಂಕೃತ ಜೀಪಿನಲ್ಲಿ ಸಾಂಪ್ರದಾಯದಂತೆ ಹತ್ತಿಯಿಂದ ಮಾಡಿದ ಬುಟ್ಟಿಯಲ್ಲಿ ನಡೆಸಲಾಯಿತು.
ರಥಬೀದಿಯಲ್ಲಿ ಶಿರೂರು ಶ್ರೀಗಳ ಪಾರ್ಥೀವ ಶರೀರವನ್ನು ಪ್ರದಕ್ಷಿಣೆ ಹಾಕಿ. ಬಳಿಕ ಕನಕನ ಕಿಂಡಿಯ ಮೂಲಕ ಶ್ರಿಕೃಷ್ಣನ ದರ್ಶನ ಮಾಡಿಸಲಾಯಿತು. ಈ ಸಂದರ್ಭ ಗೋವಿಂದ ಗೋವಿಂದ ಎಂಬ ನಾಮಸ್ಮರಣೆಯೊಂದಿಗೆ ಶ್ರೀಗಳ ಪಾರ್ಥೀವ ಶರೀರವನ್ನು ಕೃಷ್ಣ ಮಠಕ್ಕೆ ತರಲಾಯಿತು. ಕೃಷ್ಣ ಮಠದಲ್ಲಿ ಎಲ್ಲಾ ಗಂಟೆ ಜಾಗಟೆಗಳನ್ನು ಮೊಳಗಿಸಿ ಶ್ರೀಗಳಿಗೆ ಅಂತಿಮ ಗೌರವ ಅರ್ಪಿಸಲಾಯಿತು.
ಶಿರೂರು ಶ್ರೀಗಳ ಪಾರ್ಥೀವ ಶರೀರ ಕೃಷ್ಣ ಮಠಕ್ಕೆ ಆಗಮಿಸುತ್ತಿದ್ದಂತೆ ಅಂತಿಮ ದರ್ಶನಕ್ಕಾಗಿ ನೂರಾರು ಭಕ್ತರು ಕಾದು ಕುಳಿತಿದ್ದರು. ಚಂದ್ರಮೌಳೇಶ್ವರನ ದರ್ಶನದ ಬಳಿಕ ಉಡುಪಿಯಿಂದ 25 ಕಿಲೋಮೀಟರ್ ದೂರವಿರುವ ಹಿರಿಯಡ್ಕದಲ್ಲಿರುವ ಶಿರೂರು ಮೂಲ ಮಠಕ್ಕೆ ಪಾರ್ಥೀವ ಶರೀರವನ್ನು ಮೆರವಣಿಗೆ ಮೂಲಕ ಕೊಂಡೊಯ್ಯಲಾಯಿತು.
ಶಿರೂರು ಮೂಲ ಮಠದ ಸ್ವರ್ಣಾ ನದಿಯಲ್ಲಿ ಸ್ನಾನ ಮಾಡಿಸಿ, ಆರತಿ ಬೆಳಗಲಾಯಿತು. ಶ್ರೀಗಳ ಪೂಜಾ ಸಾಮಾಗ್ರಿಗಳನ್ನು ಶರೀರದ ಜೊತೆ ಇರಿಸಿ, ಬೃಂದಾವನ ನಿರ್ಮಿಸಲಾಯಿತು. ಅದರಲ್ಲಿ ಉಪ್ಪು ಹತ್ತಿ ಕಾಳು ಮೆಣಸು ಕರ್ಪೂರಗಳನ್ನು ಹಾಕಿ ಶಿರೂರು ಮೂಲ ಮಠದ ಸ್ವರ್ಣಾ ನದಿ ತಟದಲ್ಲಿ ಸಮಾಧಿ ಮಾಡಲಾಯಿತು. ಮಧ್ವ ಸಂಪ್ರದಾಯದಂತೆ ಮೂಲಮಠದ ಬೃಂದಾವನದಲ್ಲಿ ಅಂತಿಮ ಸಂಸ್ಕಾರ ನೆರವೇರಿಸಲಾಯಿತು. ಶಿರೂರು ಮಠದ ದ್ವಂದ್ವ ಮಠ ಸೋದೆ ಮಠದವರು ಎಲ್ಲಾ ಕ್ರಿಯಾ ವಿಧಿ ವಿಧಾನಗಳನ್ನು ನೆರವೇರಿಸಿದರು.
ಅದಮಾರು, ಕಾಣಿಯೂರು ಹಾಗೂ ಸೋದೆ ಶ್ರೀಗಳು ಶೀರೂರು ಮೂಲಮಠಕ್ಕೆ ತಡವಾಗಿ ಆಗಮಿಸಿಆಗಮಿಸಿ ಅಂತಿಮ ದರ್ಶನ ಪಡೆದರು.
ಕೆಮಾರು ಮಠದ ಈಶ ವಿಠಲ ದಾಸ್ ಸ್ವಾಮೀಜಿ, ಉಡುಪಿ ಶಾಸಕ ರಘುಪತಿ ಭಟ್, ಸಾಯಿ ರಾಧಾ ಬಿಲ್ಡರ್ಸ್ ಪ್ರವರ್ತಕ ಮನೋಹರ್ ಶೆಟ್ಟಿ ಮತ್ತು ಇತರರು ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದರು.
Click this button or press Ctrl+G to toggle between Kannada and English