ಮಂಗಳೂರು : ಬಜಪೆಯ ಹಳೆಯ ವಿಮಾನ ನಿಲ್ದಾಣದಲ್ಲಿ ಭಾರತೀಯ ನೌಕಾಪಡೆಗೆ ಸೇರಿದ ಹೆಲಿಕಾಪ್ಟರ್ನಲ್ಲಿ ದಿಢೀರ್ ಹೊಗೆ ಹಾಗೂ ಬೆಂಕಿ ಕಾಣಿಸಿಕೊಂಡ ಘಟನೆ ಸೋಮವಾರ ಬೆಳಗ್ಗೆ ನಡೆಯಿತು.
ಕೊಚ್ಚಿಯ ಗರುಡ ನೌಕೆಯಿಂದ ಹೊರಟ ಹೆಲಿಕಾಪ್ಟರ್ ಇಂಧನ ತುಂಬಿಸಿಕೊಳ್ಳಲು ಬೆಳಗ್ಗೆ 10.45ರ ವೇಳೆ ಬಜಪೆ ವಿಮಾನ ನಿಲ್ದಾಣದಲ್ಲಿ ಇಳಿದಿತ್ತು. ನಿಲುಗಡೆಗೊಂಡಿದ್ದ ಕಾಪ್ಟರ್ನ ರೋಟಾರ್ ಬಳಿ 10.56ರ ವೇಳೆ ಹೊಗೆ ಚಿಮ್ಮುತ್ತಿದ್ದು ಇದೇ ವೇಳೆ ಬೆಂಕಿಯೂ ಕಾಣಿಸಿಕೊಂಡಿತು. ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರದ ಅಗ್ನಿಶಾಮಕ ಸಿಬಂದಿ ಕಾಪ್ಟರ್ನ ಸಿಬಂದಿಗಳ ಸಹಕಾರದಿಂದ ಅಗ್ನಿಶಮನ ನೊರೆಯನ್ನು ಬಳಸಿ ಬೆಂಕಿಯನ್ನು ನಂದಿಸಿದರು. ನಾಲ್ಕು ನಿಮಿಷಗಳೊಳಗ ಸಮಗ್ರ ಕಾರ್ಯಾಚರಣೆ ಪೂರ್ಣಗೊಂಡಿತು. ಹೆಲಿಕಾಪ್ಟರ್ನ ಸ್ವಲ್ಪಭಾಗ ಹಾನಿಗೊಂಡಿದೆ. ಶಾರ್ಟ್ಸರ್ಕಿಟ್ನಿಂದ ಕಿಡಿ ಹೊಮ್ಮಿ ಈ ಘಟನೆ ಸಂಭವಿಸಿರಬಹುದೆಂದು ಪ್ರಾಥಮಿಕ ಮಾಹಿತಿಗಳು ತಿಳಿಸಿದೆ. ಈ ಹೊಗೆಯನ್ನು ಶಮನಗೊಳಿಸಲಾಯಿತು. 13 ಮಂದಿ ಈ ಹೆಲಿಕಾಪ್ಟರ್ನಲ್ಲಿದ್ದರು. ಯಾರೂ ಗಾಯಗೊಂಡಿಲ್ಲ.
ಕೇಂದ್ರ ಕೈಗಾರಿಕಾ ಭದ್ರತಾ ದಳದವರು (ಸಿಐಎಸ್ಎಫ್) ಗಮನಿಸಿ ಕೂಡಲೇ ವಾಯು ಸಂಚಾರಕ ನಿಯಂತ್ರಣ (ಎಟಿಸಿ) ಗೋಪುರಕ್ಕೆ ಮಾಹಿತಿ ನೀಡಿದ ಕಾರಣ. ಆಗಬಹುದಾದ ಭಾರೀ ದುರಂತವೊಂದು ತಪ್ಪಿತ್ತು. ಪಕರಣದ ತನಿಖೆ ತನಿಖೆಯನ್ನು ನೌಕಾದಳ ಮತ್ತು ಪ್ರಾಧಿಕಾರಗಳು ಈಗಾಗಲೇ ಆರಂಭಿಸಿವೆ.
ಅಪರಾಹ್ನ ಕೊಚ್ಚಿ ನೌಕಾ ನೆಲೆಯಿಂದ ಬಂದ ಸಣ್ಣ ವಿಮಾನದಲ್ಲಿ ಈ 13 ಮಂದಿ ಮುಂಬಯಿಗೆ ಪ್ರಯಾಣಿಸಿದರು.