[1]ಗದಗ: ಜನ ಪ್ರತಿನಿಧಿಗಳಿಗೆ ವಿದ್ಯಾರ್ಥಿನಿ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿರುವ ಘಟನೆ ನಡೆದಿದೆ.
38 ನೇ ನರಗುಂದ ಬಂಡಾಯ ದಿನಾಚರಣೆ ಕಾರ್ಯಕ್ರಮದಲ್ಲಿ ಪಿಯುಸಿ ಪ್ರಥಮ ವರ್ಷದ ವಿದ್ಯಾರ್ಥಿನಿ ಸುಮಾ ಆಕ್ರೋಶ ವ್ಯಕ್ತಪಡಿಸಿದ್ದು, ಸರ್ಕಾರ ಹಾಗೂ ಜನಪ್ರತಿನಿಧಿಗಳ ವಿರುದ್ಧ ಕಿಡಿಕಾರಿದ್ದಾಳೆ.
ಗದಗ ಜಿಲ್ಲೆಯ ನರಗುಂದ ಪಟ್ಟಣದ ರೈತರ ಸಾವಿನ ಬಗ್ಗೆ ಸರ್ಕಾರ ಜನಪ್ರತಿನಿಧಿಗಳು ಕೇವಲವಾಗಿ ಕಾಣ್ತಾರೆ. ಚುನಾವಣೆಯಲ್ಲಿ ಕೈಮುಗಿದು ಅಕ್ಕಾ-ಅಣ್ಣಾ ಅಂತ ಬರ್ತಾರೆ. ಚುನಾವಣೆಯಲ್ಲಿ ಹಣ, ಮದ್ಯ ಹಂಚುತ್ತಾರೆ. ಮದ್ಯ ಕುಡಿದು ಮನೆಯಲ್ಲಿ ಹೆಂಡತಿಯನ್ನೇ ಹೊಡಿತಾರೆ. ಇಂಥವರಿಗೆ ಮತ ಹಾಕಿ ಅಂತ ಮನೆಯಲ್ಲಿ ಗಂಡಂದಿರು ಹೊಡಿತಾರೆ. ಚುನಾವಣೆ ಬಳಿಕ ಲೂಟಿ ಮಾಡ್ತಾರೆ ಎಂದು ಜನ ಪ್ರತಿನಿಧಿಗಳಿಗೆ ಝಾಡಿಸಿದ ವಿದ್ಯಾರ್ಥಿನಿ ರೈತರ ಮಕ್ಕಳಿಗೆ ಪೆನ್ನು ಖರೀದಿಗೆ ಎರಡು ರೂಪಾಯಿ ಸಿಗಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಆದರೆ ಜನಪ್ರತಿನಿಧಿಗಳ ಮಕ್ಕಳು ಸಾವಿರಾರು ರೂಪಾಯಿ ಹಣವನ್ನು ಪಾರ್ಟಿಗೆ ಖರ್ಚು ಮಾಡ್ತಾರೆ . ಜನಪ್ರತಿನಿಧಿಗಳು ಸ್ವಾರ್ಥಿಗಳು ಅಂತ ಕಿಡಿಕಾರಿದ ವಿದ್ಯಾರ್ಥಿನಿ, ಸರ್ಕಾರಗಳು ರೈತರಿಗಾಗಿ ಏನೂ ಮಾಡೋದಿಲ್ಲ. ನೀರು ಕೊಡಿ ಅಂತ ಸರ್ಕಾರಗಳನ್ನು ಕೇಳಿದರೆ ಮತ್ತೊಂದು ವರ್ಷ ಇರಿ.. ಇನ್ನೊಂದು ವರ್ಷ ಇರಿ.. ಅಂತ ಮುಂದೂಡುತ್ತವೆ. ಹಾಗಾಗಿಯೇ ಕಳಸಾ ಬಂಡೂರಿ ಹೋರಾಟ 38 ವರ್ಷಕ್ಕೆ ಬಂದು ನಿಂತಿದೆ. ಆದರೆ ಅವರಿಗೆ ಗೊತ್ತಿಲ್ಲ ರೈತರು ಹಾಕೋ ಒಂದು ತುತ್ತು ಅನ್ನವನ್ನೇ ತಿನ್ನಬೇಕು ಅಂತ. ರೈತರು ತಾವು ಬೆಳೆದ ಬೆಳೆಯನ್ನು ಯಾರಿಗೂ ಕೊಡಬೇಡಿ. ಆವಾಗ ಬರೀ ನೀರು ಕುಡಿದೇ ಬದುಕಲಿ ನೋಡೋಣ ಎಂದು ರಾಜಕಾರಣಿಗಳಿಗೆ ವಿದ್ಯಾರ್ಥಿನಿ ಬೆವರಿಳಿಸಿದಳು.