[1]ಮಂಗಳೂರು: ಹಜ್ ಕರ್ಮ ನಿರ್ವಹಿಸಲು ಹಜ್ಜಾಜಿಗಳ ತಂಡ ಮಂಗಳೂರಿನಿಂದ ಶನಿವಾರದಂದು ತೆರಳಿದ್ದು, ಇಂದು ಮದೀನಾ ತಲುಪಿದ್ದಾರೆ. ಕರ್ನಾಟಕದ ಮೊದಲ ಹಜ್ಜಾಜಿಗಳ ತಂಡ ಇದಾಗಿದೆ.
146 ಹಜ್ಜಾಜಿಗಳು ಶನಿವಾರದಂದು ಮದೀನಾಕ್ಕೆ ಆಗಮಿಸಿದ್ದು, ಕರ್ನಾಟಕದಿಂದ ಭಾನುವಾರ ಹಾಗೂ ಸೋಮವಾರವು ಕೂಡ ಹಜ್ಜಾಜಿಗಳು ಮದೀನಾ ಆಗಮಿಸಲಿದ್ದಾರೆ. ಮದೀನಾ ತಲುಪಿದ ಈ ತಂಡಕ್ಕೆ ಕೆ.ಸಿ.ಎಫ್. ಹೆಚ್. ವಿ. ಸಿ ಕಾರ್ಯಕರ್ತರು ಅದ್ದೂರಿ ಸ್ವಾಗತ ಕೋರಿದರು. ಹಜ್ಜಾಜಿಗಳು ತಂಗುವ ವಸತಿಗಳಿಗೆ ತೆರಳಿದ ಹೆಚ್.ವಿ.ಸಿ ಕಾರ್ಯಕರ್ತರು ದಣಿದು ಬಂದ ಹಜ್ಜಾಜಿಗಳಿಗೆ ಹಣ್ಣು ಹಂಪಲು ನೀಡಿ, ಹಜ್ಜಾಜಿಗಳ ಕೊಠಡಿಗಳಿಗೆ ಲಗೇಜ್ ಸಾಗಿಸಲು ಸಹಕರಿಸಿದರು.
ಹಜ್ ಕರ್ಮ ನಿರ್ವಹಿಸಲು ಆಗಮಿಸಿದ ನಾವು ಯಾವುದೇ ತೊಂದರೆಯಿಲ್ಲದೇ ಮದೀನಾ ತಲುಪಿದ್ದು ಬಹಳ ಸಂತೋಷವಾಗಿದೆ. ಕೆಸಿಎಫ್ ಕಾರ್ಯಕರ್ತರು ನಮ್ಮನ್ನು ಆದರದಿಂದ ಸ್ವಾಗತಿಸಿ, ಎಲ್ಲಾ ಹಜ್ಜಾಜಿಗಳಿಗೆ ಧೈರ್ಯ ತುಂಬಿದ್ದಾರೆ ಎಂದು ಬಜ್ಪೆ ಜುಮಾ ಮಸೀದಿ ಅಧ್ಯಕ್ಷ ಇಸ್ಮಾಯಿಲ್ ಹಾಜಿ ತಿಳಿಸಿದರು.
ಎಲ್ಲಾ ಹಾಜಿಗಳಿಗೆ ದಿನದ 24 ಗಂಟೆಗಳ ಕಾಲ ಅಗತ್ಯವಿರುವ ಸೇವೆ ನೀಡಲು ಕೆ.ಸಿ.ಎಫ್. ಹೆಚ್. ವಿ. ಸಿ ಕಾರ್ಯಕರ್ತರು ಸನ್ನದ್ಧರಾಗಿದ್ದಾರೆ ಎಂದು ಹೆಚ್.ವಿ.ಸಿ ರಾಷ್ಟ್ರೀಯ ಸಮಿತಿ ಕನ್ವೀನರ್ ಸೆಲೀಂ ಕನ್ಯಾಡಿ ತಿಳಿಸಿದ್ದಾರೆ. ಈ ವೇಳೆ ಕೆ.ಸಿ.ಎಫ್. ಹೆಚ್.ವಿ.ಸಿ ಮದೀನಾ ಮುಖ್ಯಸ್ಥ ತಾಜುದ್ದೀನ್ ಸುಳ್ಯ ಸೇರಿದಂತೆ ಇತರ ಕೆ.ಸಿ.ಎಫ್. ಹೆಚ್. ವಿ. ಸಿ ಕಾರ್ಯಕರ್ತರು ಉಪಸ್ಥಿತರಿದ್ದರು .