ಮಂಗಳೂರು: ವಿಧಾನ ಸಭಾ ಉಪ ಸಭಾಧ್ಯಕ್ಷ ಎನ್. ಯೋಗೀಶ್ ಭಟ್ ಮತ್ತು ಅವರ ಕುಟುಂಬದ ಸದಸ್ಯರು ಭಾನುವಾರ ಬೆಳಗ್ಗಿನ ಜಾವ ಮಂಗಳೂರಿನಿಂದ ಮೈಸೂರಿಗೆ ಖಾಸಗಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಪ್ರಯಾಣಿಸುತ್ತಿದ್ದಾಗ ಅವರ ಸರಕಾರಿ ವಾಹನ ಚಾಲಕನ ನಿಯಂತ್ರಣ ತಪ್ಪಿ ಸುಳ್ಯ ತಾಲೂಕಿನ ಪೆರಾಜೆಯಲ್ಲಿ ಅಪಘಾತಕ್ಕೀಡಾಯಿತು.
ಘಟನೆಯಲ್ಲಿ ಯೋಗೀಶ್ ಭಟ್ ಅವರು ಅಪಾಯದಿಂದ ಪಾರಾಗಿದ್ದಾರೆ. ಪತ್ನಿ ವಿಜಯ ಭಟ್ ಅವರ ತಲೆಗೆ ತೀವ್ರ ಗಾಯವಾಗಿದ್ದು, ಅವರನ್ನು ಮಂಗಳೂರಿನ ಖಾಸಗಿ ಆಸ್ಪತೆಗೆ ದಾಖಲಿಸಲಾಗಿದೆ. ಕಾರಿನಲ್ಲಿ ಯೋಗೀಶ್ ಭಟ್ , ಪತ್ನಿ ವಿಜಯ ಭಟ್, ಪುತ್ರ ಹಾಗೂ ಸೋದರ ಉಮೇಶ್ ಭಟ್ ಮತ್ತವರ ಪತ್ನಿ ಹಾಗೂ ಚಾಲಕ ಸಹಿತ ಒಟ್ಟ 6 ಮಂದಿ ಇದ್ದರು.
ಯೋಗೀಶ್ ಭಟ್ ಮತ್ತು ಇತರರಿಗೆ ಸಣ್ಣ ಪುಟ್ಟ ತರಚಿದ ಗಾಯಗಳಾಗಿವೆ. ಅವರನ್ನು ಸುಳ್ಯ ಸರಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಮಂಗಳೂರಿಗೆ ಕಳುಹಿಸಲಾಗಿತ್ತು.
ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವಿಜಯ ಭಟ್ ಅವರು ಚೇತರಿಸುತ್ತಿದ್ದು, ಅಪಾಯದಿಂದ ಪಾರಾಗಿದ್ದಾರೆ. ಮಾಜಿ ಮುಖ್ಯಮಂತ್ರಿ ಯೆಡ್ಯುರಪ್ಪ ಸಹಿತ ಪಕ್ಷ ದ ಮುಖಂಡರು ಆಸ್ಪತ್ರೆಗೆ ಭೇಟಿ ನೀಡಿದರು.