[1]ಹುಬ್ಬಳ್ಳಿ : ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆ ಇಂದಿರಾ ಕ್ಯಾಂಟಿನ್. ಹು-ಧಾ ಅವಳಿ ನಗರದಲ್ಲಿಯೂ ಕೂಡ ಇಂದಿರಾ ಕ್ಯಾಂಟಿನ್ ತಲೆ ಎತ್ತಿದ್ದವು. ಉದ್ಘಾಟನೆಯಾಗಬೇಕು ಎನ್ನುವಷ್ಟರಲ್ಲಿ ವಿಧಾನಸಭೆ ಚುನಾವಣೆ ಘೋಷಣೆಯಾಯಿತು. ಈಗಸಮ್ಮಿಶ್ರ ಸರ್ಕಾರವಿದ್ದು, ಸರ್ಕಾರ ರಚನೆಯಾಗಿ 2 ತಿಂಗಳು ಮುಗಿದರೂ ಇಂದಿರಾ ಕ್ಯಾಂಟಿನ್ ಗೆ ಇನ್ನೂ ಉದ್ಘಾಟನೆ ಭಾಗ್ಯ ಬಂದಿಲ್ಲ.
ಬಡವರು, ಕೂಲಿ ಕಾರ್ಮಿಕರಿಗೆ ಕಡಿಮೆ ದರದಲ್ಲಿ ಊಟ ಮತ್ತು ಉಪಹಾರ ನೀಡಬೇಕಿದ್ದ ಕ್ಯಾಂಟಿನನ್ನು ಜಿಲ್ಲಾ ಉಸ್ತುವಾರಿ ಸಚಿವರಿಂದಲೇ ಇಂದಿರಾ ಕ್ಯಾಂಟಿನ್ ಉದ್ಘಾಟನೆ ಮಾಡಿಸಬೇಕು ಎಂಬ ಮಾತು ಕೇಳಿ ಬರುತ್ತಿವೆ. ಆದರೆ ಇಷ್ಟು ದಿನಗಳವರೆಗೆ ಜಿಲ್ಲಾ ಉಸ್ತುವಾರಿ ಸಚಿವರ ನೇಮಕವಾಗಿರಲಿಲ್ಲ. ಈಗ ಆರ್ ವಿ ದೇಶಪಾಂಡೆ ಅವರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದು, ಇನ್ನಾದರೂ ಉದ್ಘಾಟನೆ ಭಾಗ್ಯ ದೊರೆಯುತ್ತದೆಯಾ ಎಂದು ಅವಳಿ ನಗರದ ಜನತೆ ಕಾಯುತ್ತಿದ್ದಾರೆ.
ಧಾರವಾಡ ಜಿಲ್ಲೆಯಲ್ಲಿ ಒಟ್ಟು 15 ಇಂದಿರಾ ಕ್ಯಾಂಟಿನ್ ಮಂಜೂರಾಗಿವೆ. ಹುಬ್ಬಳ್ಳಿ -8, ಧಾರವಾಡ- 4, ಕಲಘಟಗಿ-1, ಕುಂದಗೋಳ-1, ನವಲಗುಂದ-1 ಕ್ಯಾಂಟಿನ ಆರಂಭಿಸಲು ಜಿಲ್ಲಾಡಳಿತ ನಿರ್ಧರಿಸಿತ್ತು. ಜಾಗದ ವಿವಾದದಿಂದ ಹುಬ್ಬಳ್ಳಿಯಲ್ಲಿ 8 ಬದಲಾಗಿ 7, ಧಾರವಾಡದಲ್ಲಿ 4 ರಲ್ಲಿ 2, ತಾಲೂಕ ಕೇಂದ್ರಕ್ಕೆ ಒಂದರಂತೆ ಒಟ್ಟು 9 ಕ್ಯಾಂಟಿನ್ ಗಳು ಕಾರ್ಯಾರಂಭ ಮಾಡಲಿವೆ.
ಹಸಿವು ಮುಕ್ತ ಕರ್ನಾಟಕ ನಿರ್ಮಾಣ ಇಂದಿರಾ ಕ್ಯಾಂಟಿನ್ ಉದ್ದೇಶವಾಗಿದೆ. 5 ರೂ. ಉಪಹಾರ, 10 ರೂ. ಊಟ ನೀಡಲಾಗುತ್ತಿದೆ. ಆದರೆ ಇಂದು ನಾಳೆ ಅನ್ನುತ್ತಲೆ ಉದ್ಘಾಟನೆ ಮುಂದೂಡುತ್ತಿರುವದು ಅವಳಿನಗರದ ನಾಗರಿಕರ ಅಸಮಾಧಾನಕ್ಕೆ ಕಾರಣವಾಗಿದೆ.