- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಮೋದಿ ಅವರನ್ನು ವಿಶ್ವವೇ ಒಪ್ಪಿದ್ದರೂ ಪಾಕಿಸ್ತಾನ ಹಾಗೂ ಸಿದ್ದರಾಮಯ್ಯ ಮಾತ್ರ ದ್ವೇಷಿಸುತ್ತಾರೆ: ಕೆ.ಎಸ್.ಈಶ್ವರಪ್ಪ

ishwarappa [1]ಚಾಮರಾಜನಗರ: ಪ್ರಧಾನಿ ನರೇಂದ್ರ ಮೋದಿ ಅವರನ್ನು ವಿಶ್ವವೇ ಒಪ್ಪಿದ್ದರೂ ಪಾಕಿಸ್ತಾನ ಹಾಗೂ ಸಿದ್ದರಾಮಯ್ಯ ಮಾತ್ರ ದ್ವೇಷಿಸುತ್ತಾರೆ ಎಂದು ಬಿಜೆಪಿ ಶಾಸಕ ಕೆ.ಎಸ್.ಈಶ್ವರಪ್ಪ ವ್ಯಂಗ್ಯವಾಡಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಲೋಕಸಭೆ ಚುನಾವಣೆಗೂ ಮುನ್ನ ಮೋದಿಯನ್ನು ಕೊಲೆಗಡುಕ ಅಂದಿದ್ದರು. ಹಿಂದುಳಿದ ವರ್ಗಗಳ ದ್ವೇಷಿ ಅಂತಾ ಕರೆದಿದ್ದರು. ತಮ್ಮನ್ನು ತಾವು ಅಹಿಂದ ವರ್ಗಗಳ ಚಾಂಪಿಯನ್ ಎಂದುಕೊಳ್ಳುವ ಸಿದ್ದರಾಮಯ್ಯ ಒಬಿಸಿ ಶಾಶ್ವತ ಆಯೋಗಕ್ಕೆ ರಾಜ್ಯಸಭೆಯಲ್ಲಿ ಬೆಂಬಲ ಕೊಡಿಸಲಿಲ್ಲ ಎಂದು ದೂರಿದರು‌.

3 ತಿಂಗಳೋ- 6 ತಿಂಗಳೋ ಸರ್ಕಾರ ಇರಲಿದ್ದು, ಈ ಸರ್ಕಾರವನ್ನು ಬಿಜೆಪಿ ಬೀಳಿಸುವ ಪ್ರಯತ್ನ ಮಾಡುವುದಿಲ್ಲ. ಸರ್ಕಾರ ಇದ್ದಷ್ಟು ದಿನ ಬಾಚಿಕೊಳ್ಳಬೇಕು ಎಂಬ ದಿಸೆಯಲ್ಲಿ ವಿಧಾನಸೌಧದಲ್ಲಿ ಡಿ ಗ್ರೂಪ್ ನೌಕರನಿಂದ ಹಿಡಿದು ಐಎಎಸ್ ಅಧಿಕಾರಿ ತನಕ ಲೂಟಿಯೇ ನಡೆಯುತ್ತಿದೆ. ವರ್ಗಾವಣೆ ದಂಧೆ ಎಗ್ಗಿಲ್ಲದೇ ಸಾಗಿದೆ ಎಂದು ಈಶ್ವರಪ್ಪ ಆರೋಪಿಸಿದರು.

ಇನ್ನು, ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ, ಜಗದೀಶ್ ಶೆಟ್ಟರ್ ಮತ್ತು ನಾನು 3 ತಂಡಗಳಾಗಿ ಲೋಕಸಭೆ ಚುನಾವಣೆ ಗಮನದಲ್ಲಿಟ್ಟುಕೊಂಡು ರಾಜ್ಯದುದ್ದಕ್ಕೂ ಪ್ರವಾಸ ಮಾಡಲಿದ್ದು, ಚಾಮರಾಜನಗರವೂ ಸೇರಿದಂತೆ 20ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಲಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪ್ರಧಾನಿ ಜನಪ್ರಿಯತೆ ಕ್ಷೀಣಿಸುತ್ತಿದೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ಸಮೀಕ್ಷೆಗಳನ್ನು ಸಂಪೂರ್ಣವಾಗಿ ಒಪ್ಪಲು ಸಾಧ್ಯವಿಲ್ಲ. ಅವರಿಚ್ಛೆಗೆ ತಕ್ಕಂತೆ ಸಮೀಕ್ಷೆಗಳನ್ನು ಪ್ರಕಟಿಸುತ್ತಾರೆ ಎಂದರು.

ಮೋದಿ ಅವರ ಕಾರ್ಯಕ್ರಮಗಳಿಗೆ ಎಲ್ಲಾ ಧರ್ಮ ಮತ್ತು ಇಡೀ ವಿಶ್ವವೇ ಮೆಚ್ಚುಗೆ ವ್ಯಕ್ತಪಡಿಸಿವೆ. ಅವರು ಮತ್ತೆ ಪ್ರಧಾನಿಯಾಗಲಿದ್ದಾರೆ ಎಂದು ಭವಿಷ್ಯ ನುಡಿದರು.