[1]ಬೆಂಗಳೂರು: ಅನೈತಿಕ ಮೈತ್ರಿ ಎಂದು ಬಿಜೆಪಿ ನಾಯಕರು ನೀಡುತ್ತಿರುವ ಹೇಳಿಕೆಯು ಸಮ್ಮಿಶ್ರ ಸರ್ಕಾರವನ್ನು ಪತನಗೊಳಿಸುವ ಪ್ರಯತ್ನದ ಭಾಗವಾಗಿದೆ. ಅವರು ಏನೇ ತಿಪ್ಪರಲಾಗ ಹಾಕಿದರೂ ಚಿಂತೆಯಿಲ್ಲ ಜೆಡಿಎಸ್ ನವರು ನಾವು ಎಲ್ಲರೂ ಒಗ್ಗಟ್ಟಾಗಿದ್ದೇವೆ ಸರ್ಕಾರಕ್ಕೆ ತೊಂದರೆಯಿಲ್ಲ, ಹೀಗಾಗಿ ಸುಸೂತ್ರವಾಗಿ ಆಡಳಿತ ನಡೆಯಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ತಿರುಗೇಟು ನೀಡಿದ್ದಾರೆ.
ಅನಗತ್ಯವಾಗಿ ಬಿಜೆಪಿ ನಾಯಕ ಈಶ್ವರಪ್ಪ ಮೈತ್ರಿ ಸರ್ಕಾರವನ್ನು ಅಪವಿತ್ರ, ಅನೈತಿಕ ಹೊಂದಾಣಿಕೆ ಮಾಡಿಕೊಂಡಿದೆ, ಹೆಚ್ಚು ದಿನ ಇರುವುದಿಲ್ಲವೆಂಬ ಕೆಲಸಕ್ಕೆ ಬಾರದ ಹೇಳಿಕೆ ನೀಡುತ್ತಿದ್ದಾರೆ. ಅವರು ಬೇಕಾದರೆ ಅನೈತಿಕ ಚಟುವಟಿಕೆ ಮಾಡಿಕೊಳ್ಳಲಿ. ಸರ್ಕಾರವನ್ನ ಇಳಿಸಬೇಕೆಂಬ ಸಿದ್ಧಾಂತ ಅವರದ್ದು ಹೀಗಾಗಿ ಸ್ವಾರ್ಥಕ್ಕಾಗಿ ಮೈತ್ರಿ ವಿಷಯವನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ನಮ್ಮ ಸರ್ಕಾರದ ಬಗ್ಗೆ ಅವರ್ಯಾಕಿಷ್ಟು ತಲೆಕೆಡಿಸಿಕೊಳ್ತಿದ್ದಾರೆ ಹಾಗಾದರೆ ಅವರಿಗೆ ನೈತಿಕತೆ ಇದೆಯಾ? ಅದರ ಆತಂಕ ನಮಗಿಲ್ಲ.
ಶಾದಿಭಾಗ್ಯಕ್ಕೆ ಅನುದಾನ ಕಡಿತ ಮಾಡಿದ್ದಾರೆ ಅನ್ನೋ ಮಾಹಿತಿ ಇಲ್ಲ. ಆದರೆ ಸಾಲಮನ್ನಾ ಮಾಡಿದ್ದರಿಂದ ಅನುದಾನ ಸರಿದೂಗಿಸಬೇಕಾಗುತ್ತದೆ. ಯಾವ ಇಲಾಖೆಯಲ್ಲಿ ಎಷ್ಟು ಅನುದಾನ ಕಡಿತವಾಗಿದೆ ಮಾಹಿತಿ ಇಲ್ಲ. ಇನ್ನೂ, ಅನುದಾನ ಹೊಂದಾಣಿಕೆ ಮಾಡೋದು ಸರ್ಕಾರಕ್ಕೆ ಬಿಟ್ಟ ವಿಚಾರ. ಈ ಬಗ್ಗೆ ಉಪಮುಖ್ಯಮಂತ್ರಿಗಳು ಹಾಗೂ ಸಚಿವ ಜಮೀರ್ ಅಹ್ಮದ್ ಜೊತೆ ಚರ್ಚಿಸುತ್ತೇನೆ ಎಂದರು.