[1]ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಕೊಡಗು ಹಾಗೂ ಕೇರಳಕ್ಕೆ ಅಗತ್ಯ ವಸ್ತುಗಳು, ಶೆಡ್ ನಿರ್ಮಾಣ ಸೇರಿದಂತೆ ಹಣದ ರೂಪದಲ್ಲಿ ಸಹಾಯ ಮಾಡಲು ಮುಂದಾಗಿದೆ.
ಬಿಬಿಎಂಪಿ ವತಿಯಿಂದ 2 ಕೋಟಿ ಪರಿಹಾರ ನಿಧಿ, ಹಾಗೂ ಪಾಲಿಕೆ ಸದಸ್ಯರ ಒಂದು ತಿಂಗಳ ಗೌರವಧನ, ನೌಕರರ ಒಂದು ದಿನದ ವೇತನ ನೀಡಲು ತೀರ್ಮಾನಿಸಿದ್ದು ಒಟ್ಟು ಮೂರುವರೇ ಕೋಟಿ ರುಪಾಯಿ ನೀಡಲು ಬಿಬಿಎಂಪಿ ಮುಂದಾಗಿದೆ. ಇದರಲ್ಲಿ ಕೇರಳಕ್ಕೆ ಒಂದು ಕೋಟಿ, ಕೊಡಗಿಗೆ ಎರಡೂವರೆ ಕೋಟಿ ನೀಡಲು ತೀರ್ಮಾನಿಸಲಾಗಿದೆ. ಇನ್ನು ಪಾಲಿಕೆ ಕೇಂದ್ರ ಕಚೇರಿಯ ಗಾಜಿನ ಮನೆಯಲ್ಲಿ ಕೌಂಟರ್ ತೆರೆಯಲು ತೀರ್ಮಾನಿಸಿದ್ದು, ನಗರದ ದಾನಿಗಳು ಗುಣಮಟ್ಟದ ಆಹಾರ ವಸ್ತುಗಳು ಹಾಗೂ ಬಟ್ಟೆಗಳನ್ನು ನೀಡಬಹುದು ಎಂದು ಮನವಿ ಮಾಡಿದರು.
ಇನ್ನೂ, ಇವುಗಳ ಮೇಲ್ವಿಚಾರಣೆಗೆ ಇಬ್ಬರು ನೋಡಲ್ ಅಧಿಕಾರಿಗಳ ನೇಮಕ ಮಾಡಿದ್ದು ಐಎಎಸ್ ಅಧಿಕಾರಿ ರಣ್ ದೀಪ್, ಭರತ್ ಲಾಲ್ ಮೀನಾ ಅವರು ಉಸ್ತುವಾರಿ ವಹಿಸಲಿದ್ದಾರೆ. ಕ್ರೆಡಾಯಿ ಸಂಸ್ಥೆ ನೇತೃತ್ವದಲ್ಲಿ ಅತಿವೃಷ್ಟಿ ಪ್ರದೇಶಗಳಲ್ಲಿ ಶೆಡ್ ನಿರ್ಮಿಸಿ ಕೊಡಲು ಹಾಗೂ ಜಂಟಿ ಆಯುಕ್ತ ಸರ್ಫರಾಜ್ ಖಾನ್ ನೇತೃತ್ವದಲ್ಲಿ ಅಗತ್ಯವಿರೋ ಔಷಧಿ ನೀಡಲು ತೀರ್ಮಾನ ಮಾಡಲಾಗಿದೆ. ಈ ಹಿಂದೆ ಮೈಸೂರು ಡಿಸಿ ಆಗಿದ್ದ ಐಎಎಸ್ ಅಧಿಕಾರಿ ರಣ್ ದೀಪ್ ಅವರಿಗೆ ನೆರವಿಗಾಗಿ ಬರುವ ವಸ್ತುಗಳ ರವಾನೆ ಹೊಣೆ ಹೊರಿಸಲಾಗಿದ್ದು, ಮೊದಲು ಮೈಸೂರಿಗೆ ಸಾಗಿಸಿ ಅಲ್ಲಿಂದ ಕೊಡಗಿಗೆ ರವಾನಿಸಲಾಗುವುದು ಎಂದಿದ್ದಾರೆ. ಅಷ್ಟೆ ಅಲ್ಲದೇ, ಬಿಬಿಎಂಪಿ ನೌಕರರ ಸಂಘದ ವತಿಯಿಂದ 50 ಮೂಟೆ ಅಕ್ಕಿ ದಾನ ಮಾಡಿ ಗಂಜಿ ಕೇಂದ್ರ ತೆರೆದು ಸಹಾಯ ಮಾಡಲು ತೀರ್ಮಾನಿಸಿದ್ದಾರೆ.