ಮಂಗಳೂರು: ಜಿಲ್ಲೆಯ ಬಂಟ್ವಾಳ ತಾಲೂಕಿನ ವಿಟ್ಲದ ಕನ್ಯಾನದ ಕೆಳಗಿನಪೇಟೆಯಲ್ಲಿ ಗುಂಪೊಂದು ಯುವಕನೋರ್ವನಿಗೆ ತಲವಾರು ಹಾಗೂ ರಾಡ್ನಿಂದ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ನಡೆದಿದೆ.
ಕರೋಪಾಡಿ ಗ್ರಾಮದ ಮಿತ್ತನಡ್ಕ ನಿವಾಸಿ ಹಮೀದ್ ಎಂಬವರ ಪುತ್ರ ನವಾಫ್ (23) ಹಲ್ಲೆಗೊಳಗಾದ ಯುವಕ. ನವಾಫ್ ಕೇರಳದಲ್ಲಿ ಉದ್ಯೋಗದಲ್ಲಿದ್ದು, ಇತ್ತೀಚೆಗೆ ಊರಿಗೆ ಮರಳಿದ್ದರು. ಕನ್ಯಾನ ಶಾಲೆಯಿಂದ ಸರ್ಟಿಫಿಕೆಟ್ ಪಡೆಯಲೆಂದು ಕನ್ಯಾನ ಪೇಟೆಗೆ ಬಂದಿದ್ದು, ಸಂಜೆ ವೇಳೆ ತನ್ನ ದ್ವಿಚಕ್ರ ವಾಹನದಲ್ಲಿ ಕನ್ಯಾನದ ಕೆಳಗಿನಪೇಟೆಯ ರಸ್ತೆ ಬದಿಯಲ್ಲಿ ನಿಂತುಕೊಂಡಿದ್ದರು.
ಈ ವೇಳೆ ಕೇರಳ ಕಡೆಯಿಂದ ಕಾರಿನಲ್ಲಿ ಬಂದ ತಂಡ, ನವಾಫ್ ಮೇಲೆ ತಲವಾರ್ ಹಾಗೂ ರಾಡ್ನಿಂದ ದಾಳಿ ನಡೆಸಿದೆ. ಈ ಸಂದರ್ಭ ನವಾಫ್ ಓಡಲು ಯತ್ನಿಸಿದ್ದು, ಆತನನ್ನು ಬೆನ್ನಟ್ಟಿ ಹಲ್ಲೆ ನಡೆಸಿದ್ದಾರೆ.
ಬಳಿಕ ಸ್ಥಳೀಯರು ಸೇರಿದ್ದರಿಂದ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ಗಾಯಾಳುವನ್ನು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಹಳೆ ದ್ವೇಷದ ಹಿನ್ನೆಲೆಯಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಈ ಬಗ್ಗೆ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Click this button or press Ctrl+G to toggle between Kannada and English