[1]ಮಂಗಳೂರು : ಪಿಡಬ್ಲೂಡಿ ಕಂಟ್ರಾಕ್ಟರ್ ಒಬ್ಬರ ಲೈಂಗಿಕ ಹಗರಣಗಳನ್ನು ಪೊಲೀಸರಿಗೆ ಸಾಕ್ಷಿ ಸಮೇತ ನೀಡಲು ಹೋದ ಸಾಮಾಜಿಕ ಕಾರ್ಯಕರ್ತೆ ಮತ್ತು ಇನ್ನಿಬ್ಬರನ್ನು ಬಂಧಿಸಿದ ಘಟನೆ ಬರ್ಕೆಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಕರ್ನಾಟಕ ರಕ್ಷಣಾ ವೇದಿಕೆ, ಬಿಜೆಪಿ ಮಹಿಳಾ ಘಟಕಗಳಲ್ಲಿ ಗುರುತಿಸಿ ಕೊಂಡಿರುವ ಶ್ರೀಲತಾಳ ಮತ್ತು ಬಿಜೆಪಿ ಕಾರ್ಯಕರ್ತ ರಾಕೇಶ್, ಸುಜಿತ್ ಪೊಲೀಸರಿಂದ ಬಂಧನಕ್ಕೊಳಗಾದವರು.
ಮಂಗಳೂರಿನ ಪಿಡಬ್ಲೂಡಿ ಕಂಟ್ರಾಕ್ಟರ್ ಕೇರಳ ಮೂಲದ ವಿ. ಶಶಿ (70) ವ್ಯಾಸನಗರದ ಪ್ಲಾಟ್ನಲ್ಲಿ ತನ್ನ ಮಗನೊಂದಿಗೆ ವಾಸವಾಗಿದ್ದಾನೆ. ಈತನ ಪತ್ನಿಗೆ ಕ್ಯಾನ್ಸರ್. ಹೀಗಾಗಿ 8 ವರ್ಷಗಳಿಂದ ಎರ್ನಾಕುಲಂನಲ್ಲಿಯೇ ಪತ್ನಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗುತ್ತಿಗೆದಾರನಾಗಿ ಕೆಲಸ ಮಾಡಿದ ಶಶಿಗೆ ಮೋಜು ಮಸ್ತಿಗೆ ಹಣ ಇತ್ತು. ನೆರವು ಕೇಳಿ ಬಂದ ಯುವತಿಯರನ್ನು ಆತ ಒಪ್ಪಿಗೆ ಮೇಲೆ ದೈಹಿಕವಾಗಿ ಬಳಸುತ್ತಿದ್ದ. ಆದರೆ ತಾನು ಸುಖಿಸುವ ದೃಶ್ಯಗಳನ್ನು ಮೊಬೈಲ್ನಲ್ಲಿ ವೀಡಿಯೋ ಮಾಡುವುದು ಈತನ ದುಶ್ಚಟ. ಹೀಗೆ ಮಾಡಿದ ವೀಡಿಯೋಗಳನ್ನು ಪೆನ್ಡ್ರೈವ್ ನಲ್ಲಿಟ್ಟು ಕಪಾಟಿನೊಳಗೆ ಇಟ್ಟಿದ್ದ.
ಈ ವಿಚಾರ ಹೇಗೋ ತಿಳಿದುಕೊಂಡ ಕರವೇ ಮುಖಂಡೆ ಶ್ರೀಲತಾ, ವೃದ್ಧನಿಂದ ಹಣ ಲೂಟಲು ಸ್ಕೆಚ್ ಹಾಕಿದ್ದಾಳೆ. ತನ್ನ ಮೂವರು ಯುವತಿಯರನ್ನು ವೃದ್ಧನ ಮನೆಗೆ ಕ್ಲೀನಿಂಗ್ ಎಂದು ಕಳುಹಿಸಿ, ಕಪಾಟಿನಲ್ಲಿಟ್ಟಿದ್ದ ಪೆನ್ಡ್ರೈವ್ ಕಳವು ಮಾಡಿಸಿದ್ದಾರೆ. ಬಳಿಕ ವೃದ್ಧ ಬಳಿ ಮಲೆಯಾಳಿಯಲ್ಲಿಯೇ ವ್ಯವಹರಿಸಿದ ಶ್ರೀಲತಾ, ವೃದ್ಧ ಶಶಿಯನ್ನು ಮಂಗಳಾ ಸ್ಟೇಡಿಯಂ ಬಳಿ ಕರೆಸಿಕೊಂಡಿದ್ದಳು. ಅಲ್ಲಿಗೆ ಬರುತ್ತಿದ್ದಂತೆಯೇ ರಾಕೇಶ್ನ ಸಹಚರರು, ವೃದ್ಧನನ್ನು ಕಾರಿಂದ ಎಳೆದು ತಮ್ಮ ಕಾರಿನಲ್ಲಿ ಹಾಕಿಕೊಂಡು ನೇರವಾಗಿ ಸುರತ್ಕಲ್ನ ಹಿಂದು ಮಹಾಸಭಾ ನಾಯಕ ರಾಜೇಶ್ ಪವಿತ್ರನ್ ಮನೆಗೆ ಒಯ್ದಿದ್ದಾರೆ. ಅಲ್ಲಿ ರಾಜೇಶ್ ಪವಿತ್ರನ್ ಎಲ್ಲರಿಗೂ ತಲಾ 5 ಲಕ್ಷ ರು. ನೀಡಬೇಕು, ಇಲ್ಲವಾದರೆ ಮಾಧ್ಯಮಕ್ಕೆ ಸೆಕ್ಸ್ ವೀಡಿಯೋ ವಿಚಾರ ಬಹಿರಂಗಪಡಿಸುವುದಾಗಿ ವೃದ್ಧನಿಗೆ ಬೆದರಿಸಿದ್ದಾನೆ.
[2]ನನ್ನ ಬಳಿ ಈಗ ಅಷ್ಟು ಹಣ ಇಲ್ಲ ಎಂದು ವೃದ್ಧ ಗೋಗರೆದಾಗ ಸಿಟ್ಟಿಗೆದ್ದ ಶ್ರೀಲತಾ ತಂಡ ವೃದ್ಧನಿಗೆ ಚೆನ್ನಾಗಿ ಬಾರಿಸಿ ಉಂಗುರ, ಚಿನ್ನದ ಸರ ಮತ್ತು 18 ಸಾವಿರ ರು. ಕಸಿದುಕೊಂಡಿದ್ದಾರೆ. ಅಲ್ಲಿಗೂ ಬೆನ್ನು ಬಿಡದ ಅಪಹರಣಕಾರರು ವೃದ್ಧನನ್ನು ವಾಪಸ್ ವ್ಯಾಸನಗರದ ಅಪಾರ್ಟ್ಮೆಂಟ್ ಬಳಿ ಕರೆ ತಂದಿದ್ದಾರೆ. ವೃದ್ಧನ ಕಾರಿನ ದಾಖಲೆ ಪತ್ರಗಳನ್ನು ವಶಪಡಿಸಿಕೊಳ್ಳುವುದು ಇವರ ತಂತ್ರವಾಗಿತ್ತು. ಆದರೆ ಕಾರಿಂದ ಹೊರ ಬರುತ್ತಿದ್ದಂತೆಯೇ ತಪ್ಪಿಸಿಕೊಂಡ ವೃದ್ಧ ಪಕ್ಕದ ಅಪಾರ್ಟ್ಮೆಂಟ್ ಬಳಿ ಹೋಗಿ ಜೋರಾಗಿ ಬೊಬ್ಬೆ ಹೊಡೆದಿದ್ದಾರೆ. ಇದನ್ನು ನೋಡಿದ ಅಲ್ಲಿನ ಭದ್ರತಾ ಸಿಬ್ಬಂದಿ ತಕ್ಷಣ ಕದ್ರಿ ಪೊಲೀಸರಿಗೆ ಕರೆ ಮಾಡಿದ್ದಾರೆ.
ಅಪಹರಣ ನಡೆದದ್ದು ಬರ್ಕೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ. ಹೀಗಾಗಿ ಬರ್ಕೆ ಪೊಲೀಸರು ಕಾರ್ಯಾಚರಣೆ ನಡೆಸಿ ಶ್ರೀಲತಾ ಮತ್ತು ರಾಕೇಶ್ ನನ್ನು ಬಂಧಿಸಿ ಜೈಲಿಗೆ ಅಟ್ಟಿದ್ದಾರೆ. ಅಪಹರಣಕ್ಕೆ ಬಳಸಿದ ಸುಜಿತ್ ಎಂಬವನ ಕಾರನ್ನು ಪೊಲೀಸರು ಮುಟ್ಟುಗೋಲು ಹಾಕಿಕೊಂಡಿದ್ದಾರೆ. ಪ್ರಕರಣದ ಇನ್ನೊಬ್ಬ ಪ್ರಮುಖ ಆರೋಪಿ ರಾಜೇಶ್ ಪವಿತ್ರನ್ ತಲೆಮರೆಸಿಕೊಂಡಿದ್ದಾನೆ. ಸುರತ್ಕಲ್ನ ಈತನ ಮನೆಗೆ ಎರಡು ಬಾರಿ ಹೋಗಿರುವ ಪೊಲೀಸರು ಶೋಧ ನಡೆಸಿ ಬರಿಗೈಯಲ್ಲಿ ವಾಪಸ್ ಬಂದಿದ್ದಾರೆ.
ದೈಹಿಕ ಸುಖ ಪಡೆದು ಸಾಲ ಮನ್ನಾ; ವೃದ್ಧ ಶಶಿ 2014 ರಿಂದ 18 ರ ವರೆಗೆ 5 ಮಂದಿ ಯುವತಿಯರ ಜತೆ ಲೈಂಗಿಕ ಕ್ರಿಯೆ ನಡೆಸಿದ ವೀಡಿಯೋಗಳನ್ನು ಮಾಡಿದ್ದಾನೆ. ಯುವತಿಯರಿಗೆಲ್ಲ 2 ಸಾವಿರ ರು.4 ಸಾವಿರ ರು. 4 ಸಾವಿರ ರು. ನೆರವಿನ ರೂಪದಲ್ಲಿ ನೀಡಿದ್ದು, ದೈಹಿಕ ಸುಖ ಪಡೆಯುವ ಮೂಲಕ ಸಾಲ ಮನ್ನಾ ಮಾಡಿದ್ದ. ಇದನ್ನು ಮೊಬೈಲ್ನಲ್ಲಿ ವೀಡಿಯೋ ಮಾಡಿಟ್ಟು ಪೆನ್ಡ್ರೈವ್ ನಲ್ಲಿ ಇರಿಸಿದ್ದ ಕಿಲಾಡಿ. ಯಾವ ಯುವತಿಯೂ ದೂರು ನೀಡದ ಹಿನ್ನೆಲೆಯಲ್ಲಿ ವೃದ್ಧನ ವಿರುದ್ಧ ಪ್ರಕರಣ ದಾಖಲಾಗಿಲ್ಲ. ಆದರೆ ಈ ವಿಚಾರ ಬಹಿರಂಗ ಪಡಿಸುತ್ತೇನೆ ಎಂದು ಹೊರಟ ಹೋರಾಟಗಾರರು ಜೈಲು ಪಾಲಾಗಿದ್ದಾರೆ.