[1]ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಶಕ್ಕೆ ಪಡೆದಿದ್ದ ಮತ್ತೋರ್ವ ಆರೋಪಿ ಮುಂಬೈನ ಶರದ್ ಕಲಾಸ್ಕರ್ ವಿಚಾರಣೆಯನ್ನು ಎಸ್ಐಟಿ ಅಧಿಕಾರಿಗಳು ಚುರುಕುಗೊಳಿಸಿದ್ದಾರೆ.
ಶರತ್ ಕಲಾಸ್ಕರ್ ಪಿಸ್ತೂಲ್ ತಯಾರಿಕೆಯಲ್ಲಿ ನಿಪುಣನಾಗಿದ್ದ. ಹೀಗಾಗಿ ಗೌರಿ ಹತ್ಯೆಗೆ ಈತನೇ ಪಿಸ್ತೂಲ್ ತಯಾರಿಸಿ ಕೊಟ್ಟಿರುವ ಶಂಕೆ ಹಿನ್ನೆಲೆ ಎಸ್ಐಟಿ ಈತನನ್ನ ವಶಕ್ಕೆ ಪಡೆದಿತ್ತು.
ಹೀಗಾಗಿ ಈತನನ್ನು ಬೆಳಗಾವಿಗೆ ಕರೆದುಕೊಂಡು ಹೋಗಿ ಸ್ಥಳ ಮಹಜರು ಮಾಡಿದ್ದಾರೆ. ಈತ ಈಗಾಗಲೇ ಬಂಧಿತರಾಗಿರುವ ಆರೋಪಿಗಳಿಗೆ ಬೆಳಗಾವಿಯಲ್ಲಿ ಶೂಟಿಂಗ್ ತರಬೇತಿ ನೀಡಿರುವ ಹಿನ್ನೆಲೆಯಲ್ಲಿ ಅಲ್ಲಿಗೆ ಕರೆತಂದು ಸ್ಥಳ ಪರೀಶೀಲನೆ ನಡೆಸಲಾಗಿದೆ. ಶರತ್ ತಯಾರಿಸುವ ಗನ್ ಮಾದರಿಯ ಬಗ್ಗೆ ಮಾಹಿತಿ ಪಡೆಯಲಾಗಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಮಹಾರಾಷ್ಟ್ರದ ಎಟಿಎಸ್ ದಾಳಿ ವೇಳೆ ಮುಂಬೈನಲ್ಲಿ 19 ಪಿಸ್ತೂಲ್ ಜಪ್ತಿಯಾಗಿತ್ತು. ಜಪ್ತಿಯಾದ ಪಿಸ್ತೂಲ್ಗಳಲ್ಲಿ ಎರಡು ಗೌರಿ ಹತ್ಯೆಗೆ ಬಳಸಿರುವ ಅನುಮಾನ ಇದೆ. ಇನ್ನು ಬಂಧಿತ ಶರದ್ ಕಲಾಸ್ಕರ್ ಪಿಸ್ತೂಲ್ ತಯಾರಿಕೆ ಮಾಡಿರುವ ಆರೋಪ ಕೂಡ ಇದೆ. ಹಾಗೆಯೇ ಪಿಸ್ತೂಲ್ಗಳ ಬಳಕೆ ಮಾಡುವುದರಲ್ಲಿ ಕಲಾಸ್ಕರ್ ನಿಪುಣನಾಗಿದ್ದು, ಈ ನಿಟ್ಟಿನಲ್ಲಿ ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ.