[1]ಮಂಗಳೂರು: ಮನೆಮಂದಿಗೆ ಬೇಡವಾಗಿ ಗೃಹಬಂಧನದಲ್ಲಿದ್ದ ವ್ಯಕ್ತಿಯ ಬಗ್ಗೆ ಅರಿತುಕೊಂಡ ಉಪ್ಪಿನಂಗಡಿ ಎಸ್ಐ ತಮ್ಮ ಮನೆಯಲ್ಲೇ ಆಶ್ರಯ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಹೌದು.., ಉಪ್ಪಿನಂಗಡಿ ಸಮೀಪದ ನಟ್ಟಿಬೈಲ್ ನಿವಾಸಿಯಾದ ಸುಲೈಮಾನ್ ಎಂಬುವರು ಹಲವಾರು ದಿನಗಳಿಂದ ಸೊಸೆಯ ಕಿರುಕುಳದಿಂದ ಗೃಹಬಂಧನದಲ್ಲಿದ್ದರು. ಊಟ ಉಪಚಾರವಿಲ್ಲದೆ ಶಾರೀರಿಕವಾಗಿ ಹಾಗೂ ಮಾನಸಿಕವಾಗಿ ಕುಗ್ಗಿ ಹೋಗಿದ್ದ ಬಗ್ಗೆ ಉಪ್ಪಿನಂಗಡಿ ನಾಗರಿಕರು ಉಪ್ಪಿನಂಗಡಿ ಎಸ್ಐ ಅವರಿಗೆ ಈ ವಿಷಯ ತಿಳಿಸಿದ್ದರು.
ವಿಷಯ ತಿಳಿದು ಭಾನುವಾರ ಉಪ್ಪಿನಂಗಡಿ ಸಬ್ ಇನ್ಸ್ಪೆಕ್ಟರ್ ನಂದಕುಮಾರ್ ಸ್ಥಳಕ್ಕೆ ಭೇಟಿ ನೀಡಿದ್ದರು. ಊರವರಿಗೆ ಭರವಸೆ ನೀಡಿ ಸುಲೈಮಾನ್ ಅವರನ್ನು ಗೃಹಬಂಧನದಿಂದ ಮುಕ್ತಗೊಳಿಸಿ, ತಮ್ಮ ಸ್ವಂತ ಮನೆಯಲ್ಲಿ ಆಶ್ರಯ ನೀಡಿ, ಊಟ, ಉಪಚಾರ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.