[1]ಮಂಗಳೂರು: ಮನೆಗೆ ವಿದ್ಯುತ್ ಸರಬರಾಜಿನಲ್ಲಿ ಆದ ವ್ಯತ್ಯಯದ ಹಿನ್ನೆಲೆಯಲ್ಲಿ ಅದನ್ನು ಸರಿಪಡಿಸಲು ಯತ್ನಿಸುತ್ತಿದ್ದ ವೇಳೆ ವಿದ್ಯುತ್ ಅಘಾತಕ್ಕೊಳಗಾಗಿ ಯುವಕನೊಬ್ಬ ಮೃತಪಟ್ಟಿರುವ ಘಟನೆ ಪುತ್ತೂರು ನಗರ ಠಾಣೆ ವ್ಯಾಪ್ತಿಯಲ್ಲಿನ ಕೆದಿಲ ಗ್ರಾಮದ ಕುಕ್ಕಾಜೆ ಎಂಬಲ್ಲಿ ನಡೆದಿದೆ.
ಕುಕ್ಕಾಜೆ ನಿವಾಸಿ ರಾಮ ಬಂಗೇರ ಎಂಬವರ ಪುತ್ರ ದಯಾನಂದ (30) ಮೃತಪಟ್ಟ ಯುವಕ.
ಟೈಲ್ಸ್, ಮಾರ್ಬಲ್, ಗ್ರಾನೈಟ್ ಅಳವಡಿಸುವ ಗಾರೆ ಕಾರ್ಮಿಕರಾಗಿದ್ದ ದಯಾನಂದ, ಕುಕ್ಕಾಜೆಯ ಮನೆಯಲ್ಲಿ ಒಬ್ಬಂಟಿಯಾಗಿದ್ದರು. ಮಂಗಳವಾರ ಸಂಜೆ ಕೆಲಸ ಮುಗಿಸಿ ಮನೆಗೆ ಬಂದಿದ್ದ ಅವರು ಮನೆಯ ವಿದ್ಯುತ್ ಸರಬರಾಜಿನಲ್ಲಿ ತೊಂದರೆಯುಂಟಾಗಿತ್ತೆಂದು ಅದನ್ನು ಸರಿಪಡಿಸಲು ಹೋಗಿದ್ದರು. ಅವರ ಮೃತದೇಹ ಇಂದು ಮನೆಯ ಅಂಗಳದ ಬದಿಯಲ್ಲಿ ವಿದ್ಯುತ್ ತಂತಿಯನ್ನು ಹಿಡಿದುಕೊಂಡಿದ್ದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಈ ಕುರಿತು ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.