[1]ಮಂಗಳೂರು: ರಿಷಬ್ ಶೆಟ್ಟಿ ನಿರ್ದೇಶನದ “ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಕೊಡುಗೆ ರಾಮಣ್ಣ” ಚಿತ್ರ ಸಾಕಷ್ಟು ಸದ್ದು ಮಾಡುತ್ತಿದೆ. ದೇಶದಲ್ಲಿ ಮಾತ್ರವಲ್ಲ ವಿದೇಶದಲ್ಲೂ ಚಿತ್ರಕ್ಕೆ ಅದ್ಭುತ ಪ್ರತಿಕ್ರಿಯೆ ಸಿಕ್ಕಿದೆ.
ಅಂದ ಹಾಗೇ ಈ ಚಿತ್ರ ಚಿತ್ರೀಕರಣಗೊಂಡಿದ್ದು ದಕ್ಷಿಣ ಕನ್ನಡ ಮತ್ತು ಕಾಸರಗೋಡು ಜಿಲ್ಲೆಯ ಹಳ್ಳಿಗಳಲ್ಲಿ. ಮಂಗಳೂರು ಸಮೀಪದ ಕೈರಂಗಳ ಅನ್ನುವ ಹಳ್ಳಿಯಲ್ಲಿ ಬಹುತೇಕ ಚಿತ್ರೀಕರಣ ನಡೆದಿದೆ. ಕೈರಂಗಳ ಹಿರಿಯ ಪ್ರಾಥಮಿಕ ಶಾಲೆಯೇ ಕಾಸರಗೋಡು ಶಾಲೆಯಾಗಿತ್ತು. ಹೂಹಾಕುವ ಕಲ್ಲು ಅನ್ನುವ ಹಳ್ಳಿಯಲ್ಲಿ ಟೀ ಅಂಗಡಿ, ಬಸ್ ಸ್ಟಾಪ್ ಗಳ ದೃಶ್ಯಗಳನ್ನು ಸೆರೆ ಹಿಡಿಯಲಾಗಿದೆ. ಶ್ರೀಕೃಷ್ಣ ಗೇಮ್ಸ್ ಕ್ಲಬ್ ಅನ್ನುವ ವಾಲಿಬಾಲ್ ಟೀಂನ ಕಚೇರಿಯೇ ಪೊಲೀಸ್ ಸ್ಟೇಷನ್ ಆಗಿತ್ತು.
[2]ಆದರೆ ಕೈರಂಗಳ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಇದೀಗ ಮುಚ್ಚುವ ಭೀತಿಯಲ್ಲಿದೆ.ಈ ಶಾಲೆಯನ್ನು ರಿಷಬ್ ಶೆಟ್ಟಿ ದತ್ತು ಪಡೆದುಕೊಳ್ಳಲು ನಿರ್ಧರಿಸಿದ್ದು, ಮಾದರಿ ಶಾಲೆಯನ್ನಾಗಿ ರೂಪಿಸುವ ಕನಸು ಹೊತ್ತಿದ್ದಾರೆ.
ಅಕ್ಟೋಬರ್ 18 ರಂದು ಕೈರಂಗಳ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಲಿರುವ ಶಾರದೋತ್ಸವ ಕಾರ್ಯಕ್ರಮದಲ್ಲಿ ಇಡೀ ಚಿತ್ರ ತಂಡ ಪಾಲ್ಗೊಳ್ಳಲಿದ್ದು, ಅವತ್ತು ಆ ಶಾಲೆಯ ಮಕ್ಕಳ ಪೋಷಕರಲ್ಲಿ ನೆರವು ನೀಡಲು ಕೇಳಿಕೊಳ್ಳಲಿದೆ. ಆ ಮೂಲಕ ಕನ್ನಡ ಶಾಲೆ ಉಳಿಸುವ ಕರ್ತವ್ಯಕ್ಕೆ ರಿಷಬ್ ಮುನ್ನುಡಿ ಬರೆಯಲಿದ್ದಾರೆ. ಕೃತಿಯನ್ನು ಕಾರ್ಯರೂಪಕ್ಕೆ ಇಳಿಸಲಿದ್ದಾರೆ.
ರಿಷಬ್ ಶೆಟ್ಟಿ ಚಿತ್ರದ ಚಿತ್ರೀಕರಣ ನಡೆಸುತ್ತಿದ್ದ ವೇಳೆ ಈ ಶಾಲೆ 42 ಮಂದಿ ವಿದ್ಯಾರ್ಥಿಗಳಿದ್ದರು. ಆ ವರ್ಷ ಕೆಲವು ಮಂದಿ ಏಳನೇ ತರಗತಿ ಪಾಸಾಗಿ ಈಗ 25 ಮಂದಿ ವಿದ್ಯಾರ್ಥಿಗಳು ಉಳಿದುಕೊಂಡಿದ್ದಾರೆ. ವಿಪರ್ಯಾಸವೆಂದರೆ ಒಂದನೇ ತರಗತಿಗೆ ವಿದ್ಯಾರ್ಥಿಗಳನ್ನು ಅಡ್ಮಿಷನ್ ಮಾಡಿಕೊಳ್ಳುವುದನ್ನು ನಿಲ್ಲಿಸಲಾಗಿದೆ. ಬೇರೆ ದಾರಿಯೇ ಇಲ್ಲದೆ ಕೆಲವೇ ವರ್ಷಗಳಲ್ಲಿ ಈ ಶಾಲೆಯನ್ನು ಮುಚ್ಚಬೇಕಾಗುತ್ತಿತ್ತು. ಇಂಥಾ ಸಂದರ್ಭದಲ್ಲಿ ರಿಷಬ್ ಶೆಟ್ಟಿ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದಾರೆ.
[3]ಇನ್ನು ತನ್ನ ಪ್ರೀತಿಯ ಶಾಲೆಯನ್ನು ಉಳಿಸಿಕೊಳ್ಳುವ ಮನಸ್ಸು ಮಾಡಿರುವ ರಿಷಬ್ ಶೆಟ್ಟಿ ಕನ್ನಡ ಶಾಲೆ ಉಳಿಸಿ ಆಂದೋಲನದ ರೂವಾರಿ ಅನಿಲ್ ಶೆಟ್ಟಿಯವರ, ಜೊತೆಗೂಡಿ ಕೈರಂಗಳ ಶಾಲೆಯನ್ನು ವಿಭಿನ್ನವಾಗಿ ರೂಪಿಸಲಿದ್ದಾರೆ.
ಹಾಗಾದರೆ ರಿಷಬ್ ತಲೆಯಲ್ಲಿ ಇರುವ ಯೋಚನೆಗಳೇನು, ಮಕ್ಕಳಿಗೆ ಪ್ರಾಥಮಿಕ ಶಿಕ್ಷಣ ಕನ್ನಡದಲ್ಲೇ ಸಿಗಬೇಕು ಅನ್ನುವು ನಿಲುವು ಹೊಂದಿರುವ ರಿಷಬ್ ನಾನು ಕನ್ನಡ ಶಾಲೆಯಲ್ಲಿ ಓದಿದವನು. ಅದರ ಜೊತೆಗೆ ಈ ಶಾಲೆ ನನ್ನ ಹೃದಯಕ್ಕೆ ತುಂಬಾ ಹತ್ತಿರವಾದ ಶಾಲೆ. ಹಾಗಾಗಿ ಈ ಶಾಲೆ ದತ್ತು ಪಡೆಯಲು ನಿರ್ಧರಿಸಿದ್ದೇನೆ. ಮತ್ತೆ ಈ ಶಾಲೆಯನ್ನು ಹೊಸತಾಗಿ ರೂಪಿಸುವ ಆಲೋಚನೆ ಇದ್ದು, ಪ್ರೀ ಸ್ಕೂಲ್ ಆರಂಭಿಸಬೇಕಾಗಿದೆ.ಮಕ್ಕಳನ್ನು ಶಾಲೆಗೆ ಕರೆತರಲು ವಾಹನ ವ್ಯವಸ್ಥೆ ಮಾಡಿಸಬೇಕಾಗಿದೆ.
ಹೊಸ ರೀತಿಯಲ್ಲಿ ಪೇಂಟ್ ಮಾಡಿಸಿ ಕ್ರಿಯೇಟಿವ್ ಆಗಿ ರೂಪಿಸಬೇಕು ಅನ್ನುವುದು ಟೀಂ ಯೋಚನೆ, ಇದೆಲ್ಲಾ ಒಬ್ಬನಿಂದ ಆಗುವ ಕೆಲಸ ಅಲ್ಲ. ಈ ಶಾಲೆಯಲ್ಲಿ ಓದಿದವರೆಲ್ಲಾ ಮುಂದೆ ಬಂದರೆ ಚೆಂದ. ಈ ಶಾಲೆಯನ್ನು ಮಾದರಿಯಾಗಿ ಮಾಡಿದರೆ ಬೇರೆ ಊರಲ್ಲಿ ಬೇರೆಯವರು ಈ ಥರದ ಪ್ರಯತ್ನ ಮಾಡುತ್ತಾರೆ ಅನ್ನುವ ಆಸೆ ನನ್ನದು ಎಂದು ಮಾತ ಮುಗಿಸಿದ್ದಾರೆ.