[1]ಬೆಂಗಳೂರು: ಫೇಸ್ಬುಕ್ನಲ್ಲಿ ಐಟಿ ಅಧಿಕಾರಿ ಎಂದು ಪರಿಚಯಿಸಿಕೊಂಡು ಐಟಿ ಇಲಾಖೆಯಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ಯುವತಿಯಿಂದ 5.8 ಲಕ್ಷ ರೂ. ಪಡೆದು ವಂಚಿಸಿದ್ದ ಆರೋಪಿಯನ್ನು ಸೈಬರ್ ಕ್ರೈಂ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಆಂಧ್ರಪ್ರದೇಶದ ಚಿತ್ತೂರು ನಿವಾಸಿ ನವೀನ್ಕುಮಾರ್ ಬಂಧಿತ ಆರೋಪಿ. ಪಿಯುಸಿ ವ್ಯಾಸಂಗ ಮಾಡಿದ್ದ ನವೀನ್, ಆರ್.ಟಿ.ನಗರದ ಹೆಲ್ತ್ ಕ್ಲಬ್ನಲ್ಲಿ ಕೆಲಸ ಮಾಡುತ್ತಿದ್ದ ಯುವತಿಯನ್ನು ಫೇಸ್ಬುಕ್ನಲ್ಲಿ ಪರಿಚಯ ಮಾಡಿಕೊಂಡಿದ್ದ. ಆಕೆಯ ಸ್ನೇಹ ಸಂಪಾದಿಸಿಕೊಂಡಿದ್ದ. ತಾನು ಐಟಿ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದೇನೆ. ನಿಮಗೂ ಐಟಿ ಇಲಾಖೆಯಲ್ಲಿ ಅಧಿಕಾರಿ ಕೆಲಸ ಕೊಡಿಸುತ್ತೇನೆ ಎಂದು ಭರವಸೆ ನೀಡಿದ್ದ.
ಬಿ.ಕಾಂ ಪೂರ್ಣಗೊಳಿಸಿದ್ದ ಯುವತಿ, ಆತನ ಮಾತು ನಂಬಿದ್ದಳು. ನಂತರದ ದಿನಗಳಲ್ಲಿ ಉದ್ಯೋಗಕ್ಕೆ ಸಂಬಂಧಿಸಿದ ಶುಲ್ಕ ಹಾಗೂ ಲಂಚ ಎಂದು ಹೇಳಿಕೊಂಡು ತನ್ನ 2 ಬ್ಯಾಂಕ್ ಖಾತೆಗಳಿಗೆ ಹಣ ಜಮಾ ಮಾಡುವಂತೆ ಕೇಳಿದ್ದ. ಆರಂಭದಲ್ಲಿ ಸಣ್ಣ ಮೊತ್ತವನ್ನು ಜಮಾ ಮಾಡುವಂತೆ ಕೇಳಿದ್ದ ಆರೋಪಿ, ನಂತರದ ದಿನಗಳಲ್ಲಿ ಬೇರೆ ಬೇರೆ ಶುಲ್ಕಗಳ ಹೆಸರಿನಲ್ಲಿ ಹೆಚ್ಚೆಚ್ಚು ಹಣ ಸಂಗ್ರಹಿಸಲು ಆರಂಭಿಸಿದ್ದ. ಕೆಲವೇ ದಿನಗಳಲ್ಲಿ 11 ಹಂತಗಳಲ್ಲಿ 5.8 ಲಕ್ಷ ರೂ. ಜಮಾ ಮಾಡಿಸಿಕೊಂಡು ವಂಚಿಸಿದ್ದ ಎನ್ನಲಾಗಿದೆ.
ನಂತರ ಫೇಸ್ಬುಕ್ ಖಾತೆ ಕ್ಲೋಸ್ ಮಾಡಿದ್ದ ಆರೋಪಿ ಸಂಪರ್ಕವನ್ನು ಕಡಿದುಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.