[1]ಬೆಂಗಳೂರು: ಜ್ವರ ಹಾಗೂ ಕೆಮ್ಮಿನಿಂದ ಬಳಲುತ್ತಿದ್ದ ನಟ ಶಿವರಾಜ್ಕುಮಾರ್ ಇಂದು ಮಲ್ಯ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಚಳಿ ಜ್ವರ ಕಾಣಿಸಿಕೊಂಡಿದ್ದರಿಂದ ಶಿವಣ್ಣ ಎರಡು ದಿನಗಳ ಹಿಂದೆ ಮಲ್ಯ ಆಸ್ಪತ್ರೆಗೆ ದಾಖಲಾಗಿದ್ದರು.
ಮೊನ್ನೆ ಸಂಜೆಯೇ ಶಿವಣ್ಣ ಡಿಸ್ಚಾರ್ಜ್ ಆಗಲಿದ್ದಾರೆ ಎನ್ನಲಾಗಿತ್ತು. ಆದರೆ ವೈದ್ಯರ ಸಲಹೆಯ ಮೇರೆಗೆ 2 ದಿನ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ಪಡೆದಿದ್ದರು. ಇಂದು ಸಂಪೂರ್ಣ ಗುಣಮುಖರಾದ ಕಾರಣ ಶಿವರಾಜ್ಕುಮಾರ್ ಅವರನ್ನು ವೈದ್ಯರು ಡಿಸ್ಚಾರ್ಜ್ ಮಾಡಿದ್ದಾರೆ. ಡಿಸ್ಚಾರ್ಜ್ ಆದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಯಾವುದೇ ರೀತಿಯ ಸಮಸ್ಯೆಯಾಗಿಲ್ಲ. ವೈರಲ್ ಫೀವರ್ ಇದ್ದಿದ್ದರಿಂದ ವಿಶ್ರಾಂತಿ ಪಡೆಯಬೇಕಾಯ್ತು. ಆರು ತಿಂಗಳಿಗೊಮ್ಮೆ ರೆಗ್ಯುಲರ್ ಚೆಕ್ಅಪ್ಗೆ ಬರುತ್ತೇನೆ ಎಂದಿದ್ದಾರೆ.
ಇನ್ನು ‘ದಿ ವಿಲನ್’ ನಾಳೆ ರಿಲೀಸ್ ಆಗ್ತಿದೆ. ಈ ಚಿತ್ರದಿಂದ ಕನ್ನಡದಲ್ಲಿ ಮಲ್ಟಿಸ್ಟಾರ್ ಸಿನಿಮಾಗಳು ಹೆಚ್ಚು ತಯಾರಾಗುತ್ತಿವೆ. ನಾಳೆ ಅಭಿಮಾನಿಗಳ ಜೊತೆ ಸಿನಿಮಾ ನೋಡಿ, ಶುಕ್ರವಾರ ಮೈಸೂರು ದಸರಾ ನೋಡಲು ಹೋಗುತ್ತೇನೆ. ಇಷ್ಟರಲ್ಲೇ ‘ದ್ರೋಣ’ ಸಿನಿಮಾ ಶೂಟಿಂಗ್ನಲ್ಲಿ ಕೂಡಾ ಭಾಗಿಯಾಗುತ್ತೇನೆ ಎಂದು ತಮ್ಮ ಮುಂದಿನ ಶೆಡ್ಯೂಲ್ ಬಗ್ಗೆ ಶಿವಣ್ಣ ಮಾಹಿತಿ ನೀಡಿದರು. ಯಾವುದೇ ಫುಡ್ ಡಯಟ್ಗೆ ವೈದ್ಯರು ತಿಳಿಸಿಲ್ಲ. ಆರಾಮವಾಗಿ ಶೂಟಿಂಗ್ನಲ್ಲಿ ಭಾಗವಹಿಸುವುದಾಗಿ ತಿಳಿಸಿದ್ದಾರೆ ಎಂದರು.