[1]ಬೆಂಗಳೂರು: ಕೇರಳದಲ್ಲಿ ಕಿಸ್ ಆಫ್ ಲವ್ ವಿವಾದದ ವೇಳೆ ಬಂಧನಕ್ಕೊಳಗಾಗಿದ್ದ ವಿವಾದಿತ ಮಹಿಳೆ ರೆಹನಾ ಫಾತಿಮಾ ಪೊಲೀಸರ ಭದ್ರತೆಯೊಂದಿಗೆ ಶಬರಿಮಲೆ ಅಯ್ಯಪ್ಪಸ್ವಾಮಿ ದರ್ಶನ ಪಡೆಯಲು ಮುಂದಾಗಿದ್ದು, ಈಗ ವಿವಾದಕ್ಕೆ ಗುರಿಯಾಗಿದೆ.
ರೆಹನಾ ಫಾತಿಮಾ ಮಾಲೆ ಧರಿಸಿ ದರ್ಶನ ಪಡೆದ ನಂತರ ತನ್ನ ಫೋಟೋವನ್ನು ಸಾಮಾಜಿಕ ತಾಣದಲ್ಲಿ ಶೇರ್ ಮಾಡಿದ್ರು. ರೆಹನಾ ಅವರ ಫೋಟೋವನ್ನ ನವರಸ ನಾಯಕ ಜಗ್ಗೇಶ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ವಿನಾಶಕಾಲೆ ವಿಪರೀತ ಬುದ್ಧಿ ಅಂತ ಕಿಡಿಕಾರಿದ್ದಾರೆ.
ನಟ ಜಗ್ಗೇಶ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ “ಅನ್ಯಧರ್ಮಿಯಳು ಈ ಅವತಾರದಲ್ಲಿ ಪೊಲೀಸರ ಬೆಂಗಾವಲಿನಲ್ಲಿ ಅಯ್ಯಪ್ಪನ ದರ್ಶನ ಮಾಡಿ ಸಾಧಿಸಿ, ಬಣ್ಣದ ವೇಶತೊಟ್ಟು ಜಾಲತಾಣದಲ್ಲಿ ಹಾಕಿರುವ ಪೋಸ್ಟ್. ಇದು ನಮ್ಮ ಸಂಪ್ರದಾಯಕ್ಕೆ ಕೊಡಲಿಪೆಟ್ಟಲ್ಲವೆ! ವಿನಾಶಕಾಲೆ ವಿಪರೀತ ಬುದ್ಧಿ! ಇಂಥವರ ಸಂತೈಸಿ ವಿಕೃತ ಆನಂದ ಪಡುತ್ತಿರುವ ಕೇರಳ ಸರ್ಕಾರ! ಬ್ರಿಟಿಷರು ಮೊಘಲ್ಗಳಿಗೆ ಬಗ್ಗದ ಹಿಂದೂ ಧರ್ಮ ಇಂಥವರಿಗಾ? ಜೈಹಿಂದ್” ಎಂದು ಬರೆದುಕೊಂಡಿದ್ದಾರೆ.
ಇನ್ನು ಕೇರಳ ಉಸ್ತುವಾರಿ ಆಗಿರುವ ಬಿಎಲ್ ಸಂತೋಷ್ ಕೂಡ ರೆಹನಾ ಬಗ್ಗೆ ಟ್ವೀಟ್ ಮಾಡಿದ್ದು, ಮೈ ಲಾರ್ಡ್ ಇದೆಲ್ಲಾ ಸೃಷ್ಟಿಯಾಗಿದ್ದು ನಿಮ್ಮ ತೀರ್ಪಿನಿಂದ ಅಂತ ಸುಪ್ರೀಂಕೋರ್ಟ್ ತೀರ್ಪಿನ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ರೆಹನಾ ಫಾತಿಮಾ ಮೂಲತಃ ಕೇರಳದ ಕೊಚ್ಚಿಯವರು. ಈಕೆ ಕಮ್ಯುನಿಸ್ಟ್ ಪಾರ್ಟಿಯ ಬೆಂಬಲಿಗಳು ಕೂಡ. ಕೇರಳದ ಪ್ರೊಫೆಸರ್ ಒಬ್ಬರು ಮಹಿಳೆಯ ಸ್ತನ ಕಲ್ಲಂಗಡಿ ಹಣ್ಣಿನಂತೆ ಎಂಬ ಹೇಳಿಕೆ ನೀಡಿ ವಿವಾದ ಹುಟ್ಟುಹಾಕಿದ್ದರು. ಆಗ ಈಕೆ ಅರೆ ಬೆತ್ತಲಾಗಿ, ತಮ್ಮ ಸ್ತನಗಳ ಮುಂದೆ ಕಲ್ಲಂಗಡಿ ಹಣ್ಣು ಇಟ್ಟುಕೊಂಡು ಪ್ರತಿಭಟನೆ ನಡೆಸಿದ್ದಳು. ಕೇರಳದಲ್ಲಿ ನೈತಿಕ ಪೊಲೀಸ್ ಗಿರಿ ವಿರುದ್ಧ ನಡೆದ ಕಿಸ್ ಆಫ್ ಲವ್ ಚಳವಳಿಯಲ್ಲೂ ರೆಹನಾ ಪಾಲ್ಗೊಂಡು ಬಂಧಿಸಲ್ಪಟ್ಟಿದ್ದರು. ಇದೀಗ ಶಬರಿಮಲೆಯ ಮಹಿಳಾ ಪ್ರವೇಶ ವಿಚಾರದಲ್ಲೂ ವಿವಾದಕ್ಕೀಡಾಗಿದ್ದಾರೆ.