[1]ಶಿವಮೊಗ್ಗ: ಮೈತ್ರಿ ಪಕ್ಷದ ಜೆಡಿಎಸ್ ಅಭ್ಯರ್ಥಿ ಮಧು ಬಂಗಾರಪ್ಪ ಡಮ್ಮಿ ಕ್ಯಾಂಡಿಡೇಟ್ ಎಂದು ಕುಮಾರ್ ಬಂಗಾರಪ್ಪ ಸಹೋದರನ ವಿರುದ್ಧವೇ ವಾಗ್ದಾಳಿ ನಡೆಸಿದ್ದಾರೆ.
ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಈಗಾಗಲೇ ಪಕ್ಷದ ಕಟ್ಟಕಡೆಯ ಕಾರ್ಯಕರ್ತರನ್ನು ಮುಟ್ಟುವ ಕೆಲಸವನ್ನು ಎರಡು ಬಾರಿ ಮಾಡಿದೆ. ಸಮ್ಮಿಶ್ರ ಸರ್ಕಾರ ಮಧು ಬಂಗಾರಪ್ಪರನ್ನು ಅಭ್ಯರ್ಥಿಯನ್ನಾಗಿ ಮಾಡಲು ಕಾಗೋಡು ತಿಮ್ಮಪ್ಪ ಹಾಗೂ ಡಿ.ಕೆ.ಶಿವಕುಮಾರ್ ಕಾರಣ ಎಂದು ಹೇಳುವ ಮೂಲಕ ಆಂತರಿಕವಾಗಿ ಪಕ್ಷದ ತೀರ್ಮಾನವಲ್ಲ ಎಂದು ಮಧು ಅವರೇ ಹೇಳಿದ್ದಾರೆ ಎಂದರು.
ಕಳೆದ ಬಾರಿಯ ಜೆಡಿಎಸ್ ಪಕ್ಷದ ಅಭ್ಯರ್ಥಿ ಕಾಣೆಯಾಗಿದ್ದಾರೆ. ಬಂಗಾರಪ್ಪನವರ ಹೆಸರನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ. ಜೆಡಿಎಸ್ ಅಭ್ಯರ್ಥಿಗೆ ಮನವಿ, ಸಮಾಜದ ಬಗ್ಗೆ ಆಸಕ್ತಿ ಇದ್ದರೆ, ಶರಾವತಿ ಕಾಲೇಜನ್ನು ಸಮಾಜಕ್ಕೆಂದು ಮಾಡಿದ್ದರು. ಆದ್ರೆ ಅದನ್ನು ಈಗ ರಿಯಲ್ ಎಸ್ಟೇಟ್ ಆಗಿ ಮಾರಾಟ ಮಾಡಿ ತಿಂದು ಹಾಕಿದ್ದಾರೆ ಮಧು ವಿರುದ್ಧ ಕುಮಾರ ಬಂಗಾರಪ್ಪ ಆರೋಪ ಮಾಡಿದರು.
ಬಂಗಾರಪ್ಪನವರ ಸ್ಮಾರಕವನ್ನು ಅಭಿವೃದ್ದಿ ಮಾಡಿಲ್ಲ. ಬಂಗಾರಪ್ಪನವರ ಪುತ್ಥಳಿಯನ್ನು ತಾಲೂಕು ಕಚೇರಿಯಲ್ಲಿ ಬೀಗ ಹಾಕಿ ಇಟ್ಟಿದ್ದು ಯಾಕೆ? ಬಿಜೆಪಿಗೆ ಬಂಗಾರಪ್ಪ ಬಂದಿದ್ದ ವೇಳೆ ಈ ಪಕ್ಷ ಕೋಮುವಾದಿ ಎಂದು ಗೂತ್ತಾಗಲಿಲ್ವಾ? ಈಗ ಬಿಜೆಪಿಯನ್ನು ಕೋಮುವಾದಿ ಎಂದು ಕರೆಯುತ್ತೀರಾ ಎಂದು ಮಧುಗೆ ಪ್ರಶ್ನೆ ಹಾಕಿದರು.
ಕಾಂಗ್ರೆಸ್ ಹಾಗೂ ಜೆಡಿಎಸ್ ಎಂದೂ ಒಂದಾಗಲ್ಲ. ಬಗರ್ ಹುಕುಂನಲ್ಲಿ ಭ್ರಷ್ಟಾಚಾರ ನಡೆಸಿ ಈಗ ಚುನಾವಣೆ ಬಂದಿದೆ ಎಂದು ಜಿಲ್ಲೆಯ ಅಭಿವೃದ್ಧಿ ಬಗ್ಗೆ ಮಾತನಾಡುತ್ತಿದ್ದಾರೆ ಎಂದರು.