[1]ಮಂಗಳೂರು: ಪೋಲಿಯೋ ದಿನಾಚರಣೆಯ ಅಂಗವಾಗಿ ಪೋಲಿಯೋ ಮುಕ್ತ ಭಾರತ ಅಭಿಯಾನವನ್ನು ರೋಟರಿ ಸಂಸ್ಥೆಯು ಇಂದು ನಗರದ ಜಿಲ್ಲಾಧಿಕಾರಿ ಕಚೇರಿಯ ಮುಂದೆ ಆಯೋಜಿಸಿತ್ತು.
ಇದಕ್ಕೂ ಮುನ್ನ ಜ್ಯೋತಿ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ಜಾಥಾ ನಡೆಯಿತು. ಈ ಸಂದರ್ಭ ಜಿಲ್ಲಾ ಆರೋಗ್ಯಾಧಿಕಾರಿ ಡಾ. ರಾಮಕೃಷ್ಣ ರಾವ್ ಮಾತನಾಡಿ, ನಮ್ಮ ದೇಶ 2014ರಿಂದ ಪೋಲಿಯೋ ಮುಕ್ತ ಭಾರತವೆಂದು ಘೋಷಣೆಗೊಂಡಿತು. ಕಳೆದ ಏಳು ವರ್ಷಗಳಿಂದ ನಮ್ಮ ದೇಶದಲ್ಲಿ ಯಾವುದೇ ಪೋಲಿಯೋ ಪ್ರಕರಣಗಳು ಕಂಡುಬಂದಿಲ್ಲ. ನಮ್ಮ ನೆರೆಯ ರಾಷ್ಟ್ರವಾದ ಪಾಕಿಸ್ತಾನ, ಅಫ್ಘಾನಿಸ್ತಾನದಲ್ಲಿ ಇನ್ನೂ ಪೋಲಿಯೋ ಪ್ರಕರಣಗಳು ಕಂಡು ಬಂದ ಕಾರಣ ರೋಟರಿ ಸಂಸ್ಥೆಯು ಕಾರ್ಯಪ್ರವೃತ್ತವಾಗಿದೆ.
ರೋಟರಿಯ ಮುಖ್ಯ ಧ್ಯೇಯ ಪೋಲಿಯೋ ಮುಕ್ತ ಪ್ರಪಂಚ. ಈ ಹಿನ್ನೆಲೆಯಲ್ಲಿ ಮಕ್ಕಳಿಗೆ ಪೋಲಿಯೋ ಲಸಿಕೆ ನೀಡುವ ಕಾರ್ಯಕ್ರಮ ಪ್ರಪಂಚದಾದ್ಯಂತ ನಡೆಸಲಾಗುತ್ತಿದೆ. ಈಗ ಪ್ರಪಂಚದ ಎಲ್ಲಾ ಕಡೆಯೂ ಪೋಲಿಯೋ ನಿರ್ಮೂಲನೆ ಆಗಿದ್ದು, ಒಂದೆರಡು ರಾಷ್ಟ್ರಗಳಲ್ಲಿ ಮಾತ್ರ ಪೋಲಿಯೋ ಪ್ರಕರಣಗಳು ಕಂಡು ಬಂದಿವೆ. ಮುಂದೆ ಇಲ್ಲಿಯೂ ಪೋಲಿಯೋ ನಿರ್ಮೂಲನೆ ಆಗಿ ಪೋಲಿಯೋ ಮುಕ್ತ ಪ್ರಪಂಚದೆಡೆಗೆ ಸಾಗೋಣ ಎಂದರು.