[1]ಚಿಕ್ಕಮಗಳೂರು: ಪಾಕ್ ಆಕ್ರಮಿತ ಕಾಶ್ಮೀರದ ಶಾರದ ನಗರದಲ್ಲಿರುವ ಶಾರದಾ ಸರ್ವಜ್ಞ ಪೀಠದ ಪುನರುತ್ಥಾನ ಕಾರ್ಯ ಹಾಗೂ ವರ್ಷದಲ್ಲಿ ಒಮ್ಮೆ ಭಾರತೀಯರಿಗೆ ಶಾರದಾ ಸರ್ವಜ್ಞ ಪೀಠಕ್ಕೆ ಪ್ರವೇಶದ ಕುರಿತು ಶೃಂಗೇರಿ ಪೀಠದ ಅಡಳಿತ ಮಂಡಳಿಯಿಂದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆಯಲಾಗಿದೆ.
ಪ್ರಧಾನಿ ಅವರಿಗೆ ಪತ್ರ ಬರೆದ ಬೆನ್ನಲ್ಲೇ ಶಾರದಾ ಸರ್ವಜ್ಞ ಪೀಠದ ಕುರಿತು ದೇಶವ್ಯಾಪಿ ಜನ ಜಾಗೃತಿ ಕಾರ್ಯಕ್ರಮ ನಡೆಸುವ ಸಲುವಾಗಿ ಶೃಂಗೇರಿ ಜಗದ್ಗುರು ಭಾರತೀ ತೀರ್ಥ ಸ್ವಾಮೀಜಿ ಹಾಗೂ ಶ್ರೀ ವಿಧುಶೇಖರ ಭಾರತೀ ಸ್ವಾಮಿಜೀಗಳನ್ನು ಕಾಶ್ಮೀರಿ ಪಂಡಿತರು ಶೃಂಗೇರಿ ಪೀಠದ ಗುರುಭವನದಲ್ಲಿ ಭೇಟಿಯಾಗಿ ಈ ವಿಷಯದ ಕುರಿತು ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.
ಶೃಂಗೇರಿ ಜಗದ್ಗುರುಗಳನ್ನು ಕಾಶ್ಮೀರಿ ಪಂಡಿತರು ಭೇಟಿಯಾಗಿರುವ ಫೋಟೋಗಳು ಈಗ ವೈರಲ್ ಆಗಿವೆ. ಶಾರದಾ ಸರ್ವಜ್ಞ ಪೀಠಕ್ಕೆ ಭಾರತೀಯರ ಪ್ರವೇಶ, ಪೂಜೆ, ಪುನರುತ್ಥಾನಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಜಗದ್ಗುರು ಶ್ರೀ ಭಾರತೀ ತೀರ್ಥ ಸ್ವಾಮೀಜಿಗಳ ಮಾರ್ಗದರ್ಶನದಲ್ಲಿ ಶೃಂಗೇರಿ ಪೀಠದ ಅಡಳಿತ ಮಂಡಳಿಯಿಂದ ಪತ್ರ ಬರೆಯಲಾಗಿತ್ತು. ಸದ್ಯ ಪ್ರಧಾನಮಂತ್ರಿಗಳ ಕಚೇರಿಯಿಂದ ಇವರು ಬರೆದ ಪತ್ರಕ್ಕೆ ಉತ್ತರವನ್ನು ಶೃಂಗೇರಿ ಶಾರದ ಪೀಠದ ಆಡಳಿತ ಮಂಡಳಿ ನಿರೀಕ್ಷಿಸುತ್ತಿದೆ.