[1]ಮಂಗಳೂರು: ಟ್ಯಾಂಕರ್ ಹಾಗೂ ಬೈಕ್ ನಡುವೆ ಅಪಘಾತವಾಗಿರುವ ಕಾರಣ, ಬೈಕ್ ಸವಾರ ಗಂಭೀರವಾಗಿ ಗಾಯಗೊಂಡು ಸಾವನ್ನಪ್ಪಿರುವ ಘಟನೆ ಮೆಲ್ಕಾರ್ ಸಮೀಪದ ಬೋಲಂಗಡಿ ಎಂಬಲ್ಲಿ ನಿನ್ನೆ ರಾತ್ರಿ ನಡೆದಿದೆ.
ವಿಟ್ಲ ಪಾತ್ರತೋಟ ಸಮೀಪದ ಕೆಲಿಂಜ ನಿವಾಸಿ ಇಸ್ಮಾಯಿಲ್ ಎಂಬವರ ಪುತ್ರ ಹಸನ್ ಶಾಹಿಕ್(28) ಮೃತವ ದುರ್ದೈವಿ.
ಮೂಡುಬಿದಿರೆಯ ಬುರ್ಕಾ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಹಸನ್, ಎಂದಿನಂತೆ ರಾತ್ರಿ ಕೆಲಸ ಮುಗಿಸಿ ಮೂಡುಬಿದಿರೆಯಿಂದ ಬಸ್ನಲ್ಲಿ ಬಂದು ಬಿಸಿ ರೋಡ್ನಲ್ಲಿ ಇರಿಸಿದ್ದ ತನ್ನ ಬೈಕ್ನಲ್ಲಿ ಮನೆಗೆ ತೆರಳುತ್ತಿದ್ದರು. ಮೆಲ್ಕಾರ್ ಸಮೀಪ ಬೈಕ್ಗೆ ಟ್ಯಾಂಕರ್ ಢಿಕ್ಕಿ ಹೊಡೆದಿದೆ. ಜತೆಗೆ ಆತನ ಮೇಲೆ ಟ್ಯಾಂಕರ್ ಹರಿದಿದೆ.
ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ ಹಸನ್ ಶಾಹಿಕ್ರನ್ನು ಬಂಟ್ವಾಳದ ಸರಕಾರಿ ಆಸ್ಪತ್ರೆಗೆ ದಾಖಲು ಮಾಡಿಲಾಗಿತ್ತಾದರೂ, ದಾರಿ ಮಧ್ಯೆ ಸಾವನ್ನಪ್ಪಿದ್ದಾನೆ. ಅಪಘಾತ ನಡೆದ ಬಳಿಕ ಟ್ಯಾಂಕರ್ ಸಹಿತ ಚಾಲಕ ಪರಾರಿಯಾಗಿದ್ದು, ತಕ್ಷಣ ಕಾರ್ಯಪ್ರವೃತ್ತರಾದ ಬಂಟ್ವಾಳ ಟ್ರಾಫಿಕ್ ಪೊಲೀಸರು ಮಿತ್ತೂರಿನಲ್ಲಿ ಟ್ಯಾಂಕರ್ ತಡೆದು ಚಾಲಕನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಸ್ಥಳಕ್ಕೆ ಬಂಟ್ವಾಳ ಟ್ರಾಫಿಕ್ ಎಸ್ಐ ಮಂಜುಳಾ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದೆ.