[1]ಮಂಗಳೂರು: ನಗರದ ಕಾವೂರು ಸಮೀಪದ ಶಾಂತಿನಗರದಿಂದ ನಾಪತ್ತೆಯಾಗಿದ್ದ ಯುವಕನೋರ್ವನ ಮೃತದೇಹ ಬಜ್ಪೆ ಸಮೀಪದ ಮರವೂರು ಡ್ಯಾಂ ಬಳಿ ಮಂಗಳವಾರ ಪತ್ತೆಯಾಗಿದೆ.
ಶಾಂತಿನಗರ ನಿವಾಸಿ ಅಶ್ಫಕ್ ಶವವಾಗಿ ಪತ್ತೆಯಾದ ವ್ಯಕ್ತಿ. ಅಶ್ಫಕ್ ಅ. 29 ರಂದು ಮಧ್ಯಾಹ್ನ 3 ಗಂಟೆ ಸುಮಾರಿಗೆ ಶಾಂತಿನಗರದ ತಮ್ಮ ಮನೆಯಲ್ಲಿ ಊಟ ಮುಗಿಸಿ ಕಾವೂರಿಗೆ ಹೋಗಿ ಬರುವುದಾಗಿ ಹೇಳಿ ಹೋದವರು, ಮತ್ತೆ ಮನೆಗೆ ವಾಪಸ್ ಬರದೆ ನಾಪತ್ತೆಯಾಗಿದ್ದರು. ಈ ಕುರಿತು ಮನೆಯವರು ಕಾವೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.
ಮಂಗಳವಾರ ಮರವೂರು ಡ್ಯಾಂ ಬಳಿ ಮೃತದೇಹವೊಂದು ತೇಲುತ್ತಿರುವುದು ಸ್ಥಳೀಯರಿಗೆ ತಿಳಿದು ಬಂದಿದೆ. ತಕ್ಷಣ ಈ ಬಗ್ಗೆ ಬಜ್ಪೆ ಪೋಲಿಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ಶವವನ್ನು ವೆನ್ಲಾಕ್ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ಕೊಂಡೊಯ್ದಿದ್ದರು. ಬಳಿಕ ಮನೆಯವರು ಯುವಕನ ಗುರುತುಪತ್ತೆ ಹಚ್ಚಿದ್ದು, ಇದೊಂದು ಆತ್ಮಹತ್ಯೆ ಇರಬಹುದು ಎಂದು ಶಂಕೆ ವ್ಯಕ್ತಪಡಿಸಿದ್ದಾರೆ.
ಇನ್ನು ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಈ ಕುರಿತು ಬಜ್ಪೆ ಠಾಣೆಯಲ್ಲಿ ಅಸಹಜ ಮೃತ್ಯು ಪ್ರಕರಣ ದಾಖಲಾಗಿದೆ.