[1]ಕುಂದಾಪುರ: ಮಹನೀಯರ ಕೊಡುಗೆ ಪ್ರತಿಫಲ ಕರ್ನಾಟಕ ಏಕೀರಣಕ್ಕೆ ನಾಂದಿಯಾದರೂ, ಭಾಷಾವಾರು ಪ್ರಾಂತ ಉದಯವಾದರೂ ಸಮಗ್ರ ಕನ್ನಡಿಗರು ಒಂದಾಗಲು ಸಾಧ್ಯವಾಗಿಲ್ಲ. 1973ರಲ್ಲಿ ಅಂದಿನ ಮುಖ್ಯಮಂತ್ರಿ ದಿ.ದೇವರಾಜ ಅರಸು ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ಮರು ನಾಮಕರಣ ಮಾಡಿದ್ದು, ಕನ್ನಡ ರಾಜ್ಯೋತ್ಸವ ಕನ್ನಡಿಗರ ಭಾವಾಭಿಮಾನ ಮೆರೆಯುವ ದಿನವಾಗಿದೆ. ದೇಶದ ಸಮಗ್ರ ಅಭಿವೃದ್ಧಿಗೆ ರಾಜ್ಯದ ಕೊಡುಗೆ ಅಪಾರ ಎಂದು ಕುಂದಾಪುರ ಉಪವಿಭಾಗಧಿಕಾರಿ ಟಿ.ಭೂಬಾಲನ್ ಬಣ್ಣಿಸಿದ್ದಾರೆ.
ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ, ತಾಲೂಕು ಪಂಚಾಯಿತಿ ಹಾಗೂ ಪುರಸಭೆ ಆಶ್ರಯದಲ್ಲಿ ಕುಂದಾಪುರ ಗಾಂಧಿ ಮೈದಾನದಲ್ಲಿ ಗುರುವಾರ ನಡೆದ ಕನ್ನಡ ರಾಜ್ಯೋತ್ಸವ ಧ್ವಜಾರೋಹಣ ನೆರವೇರಿಸಿ, ಗೌರವ ವಂದನೆ ಸ್ವೀಕರಿಸಿ ಮಾತನಾಡುತ್ತಿದ್ದರು.
ಆಲೂರು ವೆಂಕಟರಾಯ, ಬಳ್ಳಾರಿ ರಂಜನ್ ಸಾಹೇಬ್ ಮುಂತಾದ ಮಹನೀಯರು ತ್ಯಾಗದ ಫಲವಾಗಿ ಅಖಂಡ ಕರ್ನಾಟಕ ನಿರ್ಮಾಣವಾಗಿದೆ. ರಾಜ್ಯದ ಏಕೀಕರಣಕ್ಕೆ ದಕ, ಉಡುಪಿ ಜಿಲ್ಲೆ ದೊಡ್ಡ ಕೊಡುಗೆ ಇದೆ. ಕಾರ್ನಾಡು ಸದಾಶಿವ ರಾಯರು, ಕಕ್ಕಿಲ್ಲಾಯ, ಮಂಜೇಶ್ವರ ಗೋವಿಂದ ಪೈ, ಕೆ.ವಿ.ಜಿನರಾಜ್ ಹೆಗ್ಗಡೆ, ಎನ್.ಯು.ಪಣಿಯಾಡಿ, ಕೋಟ ಶಿವರಾಮ ಕಾರಂತ ಮುಂತಾದ ದಿಗ್ಗಜರ ಕೊಡುಗೆ ಅಪಾರವಾಗಿದೆ. ರಾಜ್ಯ ಸರ್ಕಾರ ಕನ್ನಡ ಭಾಷೆ ಹಾಗೂ ಸಂಸ್ಕೃತಿ ಉಳಿಸಿಬೆಳೆಸಲು ಶ್ರಮಿಸುತ್ತಿದೆ. ಆಡಳಿತದಲ್ಲಿ ಕನ್ನಡ ಬಳಸಲು ಶೇ.100ರಷ್ಟು ಅನುಷ್ಠಾನ ಗೊಳಿಸಲು ಪ್ರಾಮಾಣಿಕ ಪ್ರಯತ್ನ ನಡೆದಿದೆ. ರಾಜ್ಯ ಸರ್ಕಾರ ಜನಪರ ಯೋಜನೆಗಳ ಮೂಲಕ ಜನ ಸಾಮಾನ್ಯರ ಅಭಿವೃದ್ಧಿಗೆ ಒತ್ತು ನೀಡಿದೆಎಂದರು.
ಕುಂದಾಪುರ ತಾಲೂಕು ಪಂಚಾಯಿತಿ ಇಒ ಕಿರಣ್ ಫೆಡ್ನೇಕರ್, ಡಿಎಸ್ಪಿ ಬಿ.ಪಿ.ದಿನೇಶ್ ಕುಮಾರ್, ವಲಯ ಶಿಕ್ಷಣ ಸಂಪನ್ಮೂಲ ವ್ಯಕ್ತಿ ಸದಾನಂದ ಬೈಂದೂರು, ವಡೇರ ಹೋಬಳಿ ಪ್ರೌಢಶಾಲೆ ಮುಖ್ಯ ಶಿಕ್ಷಕ ಚಂದ್ರಶೇಖರ ಶೆಟ್ಟಿ, ಪುರಸಭೆ ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ, ತಾಲೂಕು ಕ್ರೀಡಾಧಿಕಾರಿ ಕುಸುಮಾಕರ ಶೆಟ್ಟಿ, ತಾಲೂಕು ಆರೋಗ್ಯಾಧಿಕಾರಿ ನಾಗಭೂಷಣ ಉಡುಪ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ರಾಘವೇಂದ್ರ ವರ್ಣಿಕರ, ಪುರಸಭೆ ಮಾಜಿ ಉಪಾಧ್ಯಕ್ಷ ರಾಜೇಶ್ ಕಾವೇರಿ, ಸದಸ್ಯ ಶ್ರೀಧರ ಶೇರೆಗಾರ್ ಇದ್ದರು.
ಕುಂದಾಪುರ ಪೊಲೀಸ್ ಠಾಣೆ ಎಸ್ಸೈ ಹರೀಶ್ ಆರ್.ನಾಯ್ಕ್ ನೇತೃತ್ವದಲ್ಲಿ ಪೊಲೀಸ್, ಹೋಮ್ ಗಾರ್ಡ್, ವಿವಿಧ ಶಾಲೆಯ ಎನ್ಸಿಸಿ, ಸೇವಾದಳ, ಸ್ಕೌಟ್ ಎಂಡ್ ಗೈಡ್ಸ್, ಹೋಲಿ ರೋಜರಿ ವಿದ್ಯಾರ್ಥಿಗಳ ಬ್ಯಾಂಡ್ಸಟ್ ವಾದ್ಯದಲ್ಲಿ ಆಕರ್ಷಕ ಪಥ ಸಂಚಲನ ನಡೆಯಿತು.
ಕುಂದಾಪುರ ತಹಸೀಲ್ದಾರ್ ತಿಪ್ಪೇಸ್ವಾಮಿ ಸ್ವಾಗತಿಸಿದರು. ಹೋಲಿ ರೋಜರಿ ಶಾಲೆ ದೈಹಿಕ ಶಿಕ್ಷಣ ಶಿಕ್ಷಕ ಚಂದ್ರಶೇಖರ ಬೀಜಾಡಿ ನಿರೂಪಿಸಿದರು. ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ. ಆಕಾಶವಾಣಿ ಕಲಾವಿದ ಗಣೇಶ್ ಗಂಗೊಳ್ಳಿ ತಂಡದವ ರಿಂದ ಸುಗಮ ಸಂಗೀತ ನಡೆಯುತು.