[1]ಮಂಗಳೂರು: ಕಾಂಗ್ರೆಸ್ ತನ್ನ ಅಂತ್ಯ ಕಾಲದಲ್ಲಿ ಟಿಪ್ಪು ಜಯಂತಿಯಂತಹ ಕಾರ್ಯಕ್ರಮಗಳನ್ನು ಮಾಡುತ್ತಿದೆ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಹೇಳಿದ್ದಾರೆ.
ಮಂಗಳೂರಿನಲ್ಲಿ ಮಾತನಾಡಿದ ಅವರು ಟಿಪ್ಪು ಜಯಂತಿ ಆಚರಣೆ ಮಾಡುವುದರ ಬದಲು ಟಿಪ್ಪುವನ್ನು ಮರೆಯುವ ಕೆಲಸ ಆಗಬೇಕಿತ್ತು. ಸಾಕಷ್ಟು ವಿರೋಧದ ನಡುವೆ ಕಾಂಗ್ರೆಸ್ ಪಕ್ಷ ಈ ಕಾರ್ಯಕ್ರಮ ನಡೆಸಲು ಮುಂದಾಗಿದೆ. ಮುಂಬರುವ ಲೋಕಸಭಾ ಚುನಾವಣೆ ಬಳಿಕ ಕಾಂಗ್ರೆಸ್ ಪಕ್ಷ ಇತಿಹಾಸದ ಪುಟ ಸೇರಲಿದೆ ಎಂದು ಹೇಳಿದ್ದಾರೆ.
ಮುಂಬರುವ ಲೋಕಸಭಾ ಚುನಾವಣೆ ದೃಷ್ಟಿಯಿಂದ ಪಕ್ಷ ಸಂಘಟನೆಗೆ ವರಿಷ್ಠರು ನಿರ್ಧರಿಸಿದ್ದಾರೆ. ಉಪಚುನಾವಣೆಯಲ್ಲಿ ಪಕ್ಷದ ಕೆಲ ನಾಯಕರ ಹೇಳಿಕೆಗಳಿಂದ ಸ್ವಲ್ಪ ಹಿನ್ನಡೆ ಆಗಿದೆ. ಇದರ ಬಗ್ಗೆ ಅವಲೋಕನ ಮಾಡಿ ಪಕ್ಷ ಸಂಘಟನೆಗೆ ನಾಯಕರು ಮುಂದಾಗಲಿದ್ದಾರೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲಿ 20 ಕ್ಕೂ ಹೆಚ್ಚು ಸ್ಥಾನವನ್ನು ಪಕ್ಷ ಗಳಿಸಲಿದೆ ಎಂದರು.
ಮಹಾಘಟಬಂದನ್ ಯಶಸ್ವಿಯಾಗಲು ಸಾಧ್ಯವಿಲ್ಲ. ಇದಕ್ಕೆ ಸಮರ್ಥ ನಾಯಕತ್ವದ ಕೊರತೆ ಇದೆ. ರಾಹುಲ್ ಗಾಂಧಿ ಒಬ್ಬ ಜೋಕರ್ ಇದ್ದ ಹಾಗೆ. ಅವರ ನಾಯಕತ್ವಕ್ಕೆ ಕಾಂಗ್ರೆಸ್ ಪಕ್ಷದಲ್ಲಿಯೇ ವಿರೋಧ ಇದೆ. ಇನ್ನು ಮಹಾಘಟಬಂದನ್ನಲ್ಲಿರುವ ಪ್ರಾದೇಶಿಕ ಪಕ್ಷಗಳು ಏಡಿ ಇದ್ದ ಹಾಗೆ. ಒಬ್ಬರು ಇನ್ನೊಬ್ಬರನ್ನು ಮೇಲಕ್ಕೆ ಹೋಗಲು ಬಿಡುವುದಿಲ್ಲ ಎಂದು ವ್ಯಂಗ್ಯವಾಡಿದರು .