[1]ಬೆಂಗಳೂರು: ಟಿಪ್ಪು ಜಯಂತಿ ಆಚರಣೆ ಸಂದರ್ಭದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯರನ್ನು ಮುಸ್ಲಿಂ ಧಾರ್ಮಿಕ ಮುಖಂಡರು ಅಭಿನಂದಿಸಿದ್ದಾರೆ.
ಇಂದು ಬೆಂಗಳೂರಿನ ಸಿದ್ದರಾಮಯ್ಯ ನಿವಾಸ ಕಾವೇರಿಗೆ ಸಚಿವ ಜಮೀರ್ ಅಹಮದ್ ನೇತೃತ್ವದಲ್ಲಿ ತೆರಳಿದ ಹಲವು ಮುಸ್ಲಿಂ ಧರ್ಮಗುರುಗಳು, ಸಿದ್ದರಾಮಯ್ಯರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ಇದೇ ವೇಳೆ ಸಿದ್ದರಾಮಯ್ಯರನ್ನು ಧರ್ಮಗುರುಗಳು ಸನ್ಮಾನಿಸಿದ್ದಾರೆ.
ಸಿದ್ದರಾಮಯ್ಯ ಸಿಎಂ ಆಗಿದ್ದ ಸಮಯದಲ್ಲಿ ಟಿಪ್ಪು ಜಯಂತಿಯನ್ನು ಆರಂಭಿಸಿದ್ದರು. ಹಾಗಾಗಿ ಅವರ ಕಾರ್ಯವನ್ನು ಗೌರವಿಸುವ ನಿಟ್ಟಿನಲ್ಲಿ ಈ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಬೆಳಗ್ಗೆ ಸಿದ್ದರಾಮಯ್ಯ ಚಿತ್ರದುರ್ಗಕ್ಕೆ ತೆರಳುವ ಮುನ್ನ ಮಾಜಿ ಸಿಎಂ ನಿವಾಸಕ್ಕೆ ತೆರಳಿದ ಮುಸ್ಲಿಂ ಮುಖಂಡರು ಸಿದ್ದರಾಮಯ್ಯ ಅವರನ್ನು ಸನ್ಮಾನಿಸಿದರು.
ಈ ವೇಳೆ ಮಾತನಾಡಿದ ಸಿದ್ದರಾಮಯ್ಯ, ಬಿಜೆಪಿಯವರು ಗೋಮುಖ ವ್ಯಾಘ್ರರು, ವಿನಾಕಾರಣ ರಾಜಕಾರಣ ಮಾಡ್ತಿದ್ದಾರೆ. ಬಿಜೆಪಿಯವರಿಗೆ ವಿಷಯವಿಲ್ಲ. ಸುಮ್ಮನೇ ಮಾತನಾಡುತ್ತಾರೆ. ಇದೇ ಯಡಿಯೂರಪ್ಪ, ಅಶೋಕ, ಜಗದೀಶ ಶೆಟ್ಟರ್ ಈ ಹಿಂದೆ ಟಿಪ್ಪುರನ್ನು ಹಾಡಿಹೊಗಳಿದ್ದರು. ಈಗೇಕೇ ವಿರೋಧ ಮಾಡುತ್ತಿದ್ದಾರೆ? ಬಿಜೆಪಿಗರ ಮಾತನ್ನ ಜನ ಒಪ್ಪಲ್ಲ. ಟಿಪ್ಪು ಸುಲ್ತಾನ್ ಮತಾಂಧನಾಗಿರಲಿಲ್ಲ. ಟಿಪ್ಪು ಎಲ್ಲಾ ಸಮುದಾಯದ ಪರ ಇದ್ದರು. ಸಿಎಂ ಆರೋಗ್ಯದ ದೃಷ್ಟಿಯಿಂದ ಕಾರ್ಯಕ್ರಮಕ್ಕೆ ಬರ್ತಿಲ್ಲ ಅನ್ನೋದನ್ನ ಕೇಳಿದ್ದೇನೆ. ಡಿಸಿಎಂ, ಸಿಎಂ ಕಾರಣಾಂತರಗಳಿಂದ ಬರುತ್ತಿಲ್ಲ. ಸರ್ಕಾರದ ವತಿಯಿಂದ ಸಚಿವರಾದ ಜಮೀರ್ ಅಹಮ್ಮದ್, ಜಯಮಾಲಾ, ಶಾಸಕ ರೋಷನ್ ಬೇಗ್, ಹ್ಯಾರಿಸ್ ಇರುತ್ತಾರೆ ಎಂದರು.
ಸಿಎಂ, ಡಿಸಿಎಂ ಕಾರ್ಯಕ್ರಮಕ್ಕೆ ಗೈರಾಗುತ್ತಿರುವ ಬಗ್ಗೆ ಮಾತನಾಡಿದ ಸಚಿವ ಜಮೀರ್ ಅಹಮದ್, ಸಿಎಂ ಕುಮಾರಸ್ವಾಮಿ ಆರೋಗ್ಯ ಸರಿಯಿಲ್ಲ. ಅದೇ ಕಾರಣಕ್ಕೆ ಅವರು ಹಾಜರಾಗುತ್ತಿಲ್ಲ. ಇದನ್ನ ಅವರು ಈಗಾಗಲೇ ಹೇಳಿದ್ದಾರೆ. ಮಾಜಿ ಸಚಿವ ಚೆನ್ನಿಗಪ್ಪ ಆರೋಗ್ಯ ವಿಚಾರಿಸಲು ಪರಮೇಶ್ವರ್ ತೆರಳಿದ್ದಾರೆ. ಚೆನ್ನಿಗಪ್ಪ ಅವರ ಅರೋಗ್ಯ ತೀವ್ರ ಹದಗೆಟ್ಟಿದೆ. ಸಿಂಗಾಪುರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹಾಗಾಗಿ ಚೆನ್ನಿಗಪ್ಪರನ್ನ ನೋಡಲು ವಿದೇಶಕ್ಕೆ ತೆರಳಿದ್ದಾರೆ. ಸಂಜೆ 3 ಗಂಟೆಗೆ ಪರಮೇಶ್ವರ್ ವಾಪಸ್ಸಾಗುತ್ತಿದ್ದಾರೆ. ಈ ಮೊದಲು ಸಂಜೆ 6.30 ಕ್ಕೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಆದರೆ, ಈಗ ಕಾರ್ಯಕ್ರಮದ ಸಮಯ ಬದಲಾವಣೆಯಾಗಿದೆ. ಹಾಗಾಗಿ ಪರಮೇಶ್ವರ್ ಭಾಗವಹಿಸಲು ಸಾಧ್ಯವಾಗುತ್ತಿಲ್ಲ ಎಂದರು. ಮೊದಲಿನಿಂದಲೂ ಬಿಜೆಪಿಯವರು ವಿರೋಧ ಮಾಡುತ್ತಿದ್ದಾರೆ. ಇದು ನಾಲ್ಕನೇ ಟಿಪ್ಪು ಜಯಂತಿ ಆಚರಣೆ. ಕೇವಲ ರಾಜಕೀಯ ಲಾಭಕ್ಕಾಗಿ ವಿರೋಧ ಮಾಡುತ್ತಿದ್ದಾರೆ ಅಷ್ಟೇ ಎಂದು ಹೇಳಿದರು.