[1]ಮಂಗಳೂರು: ಅಂತಾರಾಜ್ಯ ದ್ವಿಚಕ್ರ ವಾಹನ ಕಳ್ಳತನದ 15 ಪ್ರಕರಣಗಳನ್ನು ಭೇದಿಸಿದ ಉಳ್ಳಾಲ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿ, ಸುಮಾರು 20 ಲಕ್ಷ ರೂ. ಮೌಲ್ಯದ 15 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.
ಕಾಸರಗೋಡು ಜಿಲ್ಲೆಯ ಮಂಜೇಶ್ವರದ ಶಾಹಿರ್(23), ಉಪ್ಪಳದ ಮೊಹಮ್ಮದ್ ಆದಿಲ್(26), ಅಬ್ದುಲ್ ಮುನಾವರ್ ಅಲಿಯಾಸ್ ಮುನ್ನ(21) ಬಂಧಿತ ಆರೋಪಿಗಳು.
ಆರೋಪಿಗಳು ಮಂಗಳೂರು ನಗರ ಕಮಿಷನರೇಟ್ ವ್ಯಾಪ್ತಿಯಲ್ಲಿ ಒಟ್ಟು 15 ದ್ವಿಚಕ್ರ ವಾಹನಗಳನ್ನು ಕಳವು ನಡೆಸಿದ್ದರು. ಕಳವುಗೈದ ದ್ವಿಚಕ್ರ ವಾಹನಗಳ ಅಂದಾಜು ಮೌಲ್ಯ 20 ಲಕ್ಷ ರೂ. ಆಗಿರುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳು ಉಳ್ಳಾಲ ಠಾಣಾ ವ್ಯಾಪ್ತಿಯಲ್ಲಿ 4 ಬುಲೆಟ್ ಬೈಕ್, ಮಂಗಳೂರು ದಕ್ಷಿಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 5 ಬುಲೆಟ್ ಬೈಕ್ ಹಾಗೂ 1 ಸ್ಕೂಟರ್, ಮಂಗಳೂರು ಉತ್ತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 1 ಬುಲೆಟ್ ಬೈಕ್ ಹಾಗೂ 1 ಸ್ಕೂಟರ್, ಮಂಗಳೂರು ಉರ್ವ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 2 ಬುಲೆಟ್ ಬೈಕ್, ಮಂಗಳೂರು ಪೂರ್ವ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 1 ಸ್ಕೂಟರ್ ಕಳವು ನಡೆಸಿದ್ದು, ಇವುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.