[1]ಮಂಗಳೂರು: ಇಲ್ಲಿನ ತೋಟಬೆಂಗ್ರೆಯಲ್ಲಿ ಬೀಚಿಗೆ ವಿಹಾರಕ್ಕೆ ಗೆಳೆಯನೊಂದಿಗೆ ಬಂದ ಯುವತಿಯನ್ನು ಏಳು ಮಂದಿ ಸಾಮೂಹಿಕ ಅತ್ಯಾಚಾರ ಎಸಗಿರುವ ಪ್ರಕರಣವನ್ನು ಪೊಲೀಸರು ಬೇಧಿಸಿದ್ದಾರೆ.
ಬಂಧಿತ ಏಳು ಮಂದಿಯಲ್ಲಿ ಮೂವರು ಅಪ್ರಾಪ್ತರಾಗಿದ್ದು, ನಾಲ್ಕು ಜನ ವಯಸ್ಕರಾಗಿದ್ದಾರೆ. ಪ್ರಜ್ವಲ್ (25), ಆದಿತ್ಯ (22), ಅರುಣ್ (25) ಮತ್ತು ಅಬ್ದುಲ್ ರಿಯಾಜ್ (35) ಬಂಧಿತ ವಯಸ್ಕರು ಎಂದು ಮಂಗಳೂರು ನಗರ ಪೊಲೀಸ್ ಕಮೀಷನರ್ ಟಿ.ಆರ್. ಸುರೇಶ್ ಕುಮಾರ್ ತಿಳಿಸಿದ್ದಾರೆ.
ಉಳಿದ ಮೂವರು ಅಪ್ರಾಪ್ತರಾಗಿದ್ದಾರೆ. ಶಂಕೆಯ ಮೇಲೆ ಇನ್ನೋರ್ವನನ್ನು ವಶಕ್ಕೆ ಪಡೆದುಕೊಳ್ಳಲಾಗಿದ್ದು, ಆತನ ವಿಚಾರಣೆ ನಡೆಯುತ್ತಿದೆ ಎಂದು ಕಮೀಷನರ್ ತಿಳಿಸಿದ್ದಾರೆ. ನವೆಂಬರ್ 18 ರಂದು ಯುವತಿಯ ಸಾಮೂಹಿಕ ಅತ್ಯಾಚಾರವಾಗಿದ್ದು, ನಿನ್ನೆ ಮಂಗಳೂರಿನ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.