[1]ಮಂಡ್ಯ: ಮದುವೆಯ ಹಿಂದಿನ ದಿನವೇ ಪ್ರೇಯಸಿಯೊಂದಿಗೆ ಮಧುಮಗ ಪರಾರಿಯಾಗಿದ್ದಾನೆ. ಆದರೆ ಅದೇ ಮುಹೂರ್ತದಲ್ಲಿ ವಧುವಿಗೆ ಮದುವೆ ನಡೆದಿರುವ ವಿಚಿತ್ರ ಪ್ರಕರಣ ನಗರದಲ್ಲಿ ನಡೆದಿದೆ.
ಮದ್ದೂರು ತಾಲೂಕಿನ ಕೆ.ಶೆಟ್ಟಹಳ್ಳಿ ಗ್ರಾಮದ ಶಿವನಂಜೇಗೌಡರ ಪುತ್ರ ಅಬಿಜಿತ್ ಗೌಡ ಪ್ರೇಯಸಿಯೊಂದಿಗೆ ಪರಾರಿಯಾಗಿರುವ ಮಧುಮಗ. ಆದ್ರೆ ಈ ಬಗ್ಗೆ ಚಿಂತಿಸಿ ಸಮಯ ಹಾಗೂ ಹಣ ವ್ಯರ್ಥ ಮಾಡದ ವಧುವಿನ ಕಡೆಯವರು ಆಕೆಯ ಸೋದರ ಮಾವನೊಂದಿಗೆ ವಿವಾಹ ನೆರವೇರಿಸಿದ್ದಾರೆ.
ಮಧುಮಗ ಅಭಿಜಿತ್ ಗೌಡ ಖಾಸಗಿ ಮೊಬೈಲ್ ಕಂಪನಿಯ ಟವರ್ ಟೆಕ್ನಿಷಿಯನ್ ಆಗಿ ಕೆಲಸ ನಿರ್ವಹಿಸುತ್ತಿದ್ದ. ಈತನಿಗೆ ಶ್ರೀರಂಗಪಟ್ಟಣ ತಾಲೂಕಿನ ಯುವತಿಯೊಂದಿಗೆ ಮದುವೆ ನಿಶ್ಚಯ ಮಾಡಲಾಗಿತ್ತು. ಅದರಂತೆ ಇಂದು ಮಂಡ್ಯದ ಬಿಜಿಎಸ್ ಸಮುದಾಯ ಭವನದಲ್ಲಿ ಮದುವೆ ನಡೆಯಬೇಕಿತ್ತು. ಆದರೆ ವರ ನಾಪತ್ತೆಯಾದ ಹಿನ್ನಲೆಯಲ್ಲಿ ಯುವತಿಯ ಸೋದರ ಮಾವನ ಜೊತೆ ಮದುವೆ ಮಾಡಲಾಗಿದೆ.
ಅಬಿಜಿತ್ ಅದೇ ಗ್ರಾಮದ ಯುವತಿಯ ಜೊತೆ ಪರಾರಿಯಾಗಿದ್ದು, ಆಕೆ ಮೈಸೂರಿನ ಕಾಲೇಜೊಂದರಲ್ಲಿ ಪ್ಯಾರಾ ಮೆಡಿಕಲ್ ವ್ಯಾಸಂಗ ಮಾಡುತ್ತಿದ್ದಳು ಎಂದು ಹೇಳಲಾಗ್ತಿದೆ. ಜೊತೆಗೆ ದೂರದ ಸಂಬಂಧಿ ಎಂದು ತಿಳಿದುಬಂದಿದೆ.
ಘಟನೆಯಿಂದ ವಿಚಲಿತರಾಗದ ವಧುವಿನ ಪೋಷಕರು ತಮ್ಮ ಸಂಬಂಧಿಯೊಂದಿಗೆ ಅದೇ ಮುಹೂರ್ತದಲ್ಲಿ ಮದುವೆ ಮಾಡಿ ಕಲ್ಯಾಣ ಕಾರ್ಯ ನೆರವೇರಿಸಿದ್ದಾರೆ.