[1]ಮಂಗಳೂರು: ನಾಲ್ಕು ವರ್ಷಗಳಿಂದ ಕೇಂದ್ರ ಸರ್ಕಾರ ಎಲ್ಲ ಕಾರ್ಯಗಳಲ್ಲಿ ವಿಫಲವಾಗಿದ್ದು, ಅವರ ಮಾತುಗಳೆಲ್ಲವೂ ಸುಳ್ಳಾಗಿವೆ. ಅಧಿಕಾರ ಅನುಭವಿಸುವಾಗ ರಾಮನ ಮರೆತ ಅವರು, ಈಗ ಅವರಿಗೆ ರಾಮನ ನೆನಪಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಮಂಗಳೂರಿನ ನೆಹರೂ ಮೈದಾನದಲ್ಲಿ ನಡೆದ ಸಾಮುದಾಯಿಕ ಸಮ್ಮಿಲನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.ಮನುಷ್ಯ ಮನುಷ್ಯನನ್ನು ದ್ವೇಷಿಸುವ ಧರ್ಮ ಯಾವುದು ಇರಲು ಸಾಧ್ಯ ಇಲ್ಲ. ಮನುಷ್ಯ ಮನುಷ್ಯನನ್ನು ಪ್ರೀತಿಸುವಂತಹ ಧರ್ಮವೇ ಎಲ್ಲ ಧರ್ಮಗಳ ಜೀವಾಳ. ಪ್ರೀತಿ-ವಿಶ್ವಾಸ ಇಲ್ಲದಿದ್ದರೆ ಅದು ಧರ್ಮವೇ ಅಲ್ಲ. ಕೆಲವರು ಸ್ವಾರ್ಥಕ್ಕೋಸ್ಕರ ಸಮಾಜವನ್ನು ಒಡೆಯುವ ಪ್ರಯತ್ನ ಮಾಡುತ್ತಿದ್ದಾರೆ. ಅದು ಧರ್ಮ, ದೇವರ ಹೆಸರಲ್ಲಿ ಮಾಡುತ್ತಿದ್ದಾರೆ. ಇದು ಧರ್ಮಕ್ಕೆ ಮತ್ತು ದೇವರಿಗೆ ಮಾಡುವ ಅಪಚಾರ ಎಂದರು.
[2]ಭಾರತದ ಸಾಮಾಜಿಕ ವ್ಯವಸ್ಥೆ, ಆರ್ಥಿಕ ವ್ಯವಸ್ಥೆ ಜಗತ್ತಿನ ಯಾವ ದೇಶದಲ್ಲೂ ನೋಡಲು ಸಾಧ್ಯವಿಲ್ಲ. ಅನೇಕ ಧರ್ಮ, ಜಾತಿ,ಭಾಷೆ,ಪ್ರದೇಶ ಹೀಗೆ ದೇಶದಲ್ಲಿ ಎಲ್ಲರು ಒಂದಾಗಿ ಬಾಳಬೇಕೆಂದು ಭಾರತದ ಸಂವಿಧಾನವನ್ನು ರೂಪಿಸಲಾಗಿದೆ ಎಂದು ಹೇಳಿದರು.
ಇತ್ತೀಚೆಗೆ ಸಿದ್ದರಾಮಯ್ಯ ಒಂದು ಧರ್ಮವನ್ನು ಓಲೈಸುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದ್ದು, ಅದಕ್ಕಿಂತ ದೊಡ್ಡ ಅಪಪ್ರಚಾರ ಇನ್ನೊಂದಿಲ್ಲ. ನಮ್ಮ ಸಂವಿಧಾನ ಯಾರನ್ನೂ ಓಲೈಸಿ ಎಂದು ಹೇಳುವುದಿಲ್ಲ. ಯಾರನ್ನೂ ವಿರೋಧ ಮಾಡಲು ಹೇಳುತ್ತಿಲ್ಲ. ಯಾರನ್ನೂ ದ್ವೇಷ ಮಾಡಿ ಎಂದು ಹೇಳುತ್ತಿಲ್ಲ. ಎಲ್ಲರೂ ಕೂಡಾ ಸಹಬಾಳ್ವೆಯಿಂದ ಜೀವನ ನಡೆಸಬೇಕಾಗಿದೆ ಎಂದು ಹೇಳಿದರು.