[1]ಹೈದರಾಬಾದ್: ಮುಸ್ಲಿಂ ಸಮುದಾಯಕ್ಕೆ ಮೀಸಲಾತಿಗಾಗಿ ಆಗ್ರಹಿಸುತ್ತಿರುವ ಎಐಎಂಐಎಂನ ಅಧ್ಯಕ್ಷ ಅಸಾದುದ್ದೀನ್ ಓವೈಸಿ, ಪ್ರಧಾನಿ ನರೇಂದ್ರ ಮೋದಿ ಅವರು ಈ ಬಗ್ಗೆ ಸಂವಿಧಾನವನ್ನು ಓದಬೇಕಾದ ಅಗತ್ಯವಿದೆ ಎಂದು ತಿರುಗೇಟು ನೀಡಿದ್ದಾರೆ.
ಹೈದಾರಾಬಾದ್ನಲ್ಲಿ ಸೋಮವಾರ ಬಿಜೆಪಿ ರ್ಯಾಲಿಯಲ್ಲಿ ಪ್ರಧಾನಿ ಮೋದಿ ಮಾತನಾಡಿದಕ್ಕೆ ಟಾಂಗ್ ನೀಡಿರುವ ಓವೈಸಿ, ನಿಮಗೆ ಸಂವಿಧಾನ ಗೊತ್ತಿಲ್ಲದೇ ಇದ್ದಲ್ಲಿ ಆ ಬಗ್ಗೆ ಗೊತ್ತಿರುವವರ ಸಹಾಯವನ್ನಾದರೂ ಪಡೆಯಿರಿ ಎಂದು ಕುಟುಕಿದ್ದಾರೆ.
ನೀವು ಸಂವಿಧಾನದ 15 ಹಾಗೂ 16 ನೇ ವಿಧಿಯಗಳನ್ನು ಓದಲೇಬೇಕು. ಮಾರಾಠರಿಗೆ, ಜಾಟರಿಗೆ ಹಾಗೂ ಗುಜ್ಜಾರ್ಗಳಿಗೆ ಮೀಸಲಾತಿ ನೀಡಿದ ನೀವು, ಮುಸ್ಲಿಂರಿಗೆ ನೀಡುತ್ತಿಲ್ಲ. ಓರ್ವ ಪ್ರಧಾನಿಯಾಗಿ ಒಂದು ಸಮುದಾಯಕ್ಕೆ ತಾರತಮ್ಯ ಮಾಡುವಂತಿಲ್ಲ. ಸಂವಿಧಾನದ ಪ್ರಕಾರ ಅಧಿಕಾರ ಸ್ವೀಕರಿಸಿರುವ ನೀವು ಮುಸ್ಲಿಂರನ್ನೂ ಒಳಗೊಂಡಂತೆ ಇಡೀ ಭಾರತಕ್ಕೆ ಪ್ರಧಾನಿ ಎಂಬುದನ್ನು ಮರೆಯಬೇಡಿ ಎಂದು ಟೀಕಿಸಿದರು.
ಮುಸ್ಲಿಂರಿಗೆ ಧರ್ಮದ ಆಧಾರದಲ್ಲಿ ಮೀಸಲಾತಿ ಕೇಳುತ್ತಿಲ್ಲ. ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಹಿಂದುಳಿದಿರುವಿಕೆಯ ಆಧಾರದಲ್ಲಿ ಆಗ್ರಹಿಸಲಾಗುತ್ತಿದೆ. ಈ ಬಗ್ಗೆ ಶಿಫಾರಸು ಮಾಡಿರುವ ಸಚ್ಚಾರ್ ಹಾಗೂ ಮಿಶ್ರ ಆಯೋಗಗಳ ವರದಿಯನ್ನು ಪರಿಗಣಿಸಿ ಎಂದು ಸಲಹೆ ನೀಡಿದ್ದಾರೆ. ಮುಸ್ಲಿಂರ ಹಿಂದುಳಿದಿರುವಿಕೆ ಸಾಬೀತಾಗಿದ್ದರೂ ನಿಮಗೆ ಅದನ್ನು ಒಪ್ಪಿಕೊಳ್ಳಲು ಆಗುತ್ತಿಲ್ಲ. ಇದೇನಾ ನಿಮ್ಮ ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಎಂದು ಛೇಡಿಸಿದರು.