[1]ಮಂಗಳೂರು: ರಾಮಮಂದಿರ ನಿರ್ಮಾಣ ಮಾಡಬೇಕು ಎಂದು ನೀಡಿರುವ ಹೇಳಿಕೆಗೆ ಈಗಲೂ ಬದ್ಧನಾಗಿದ್ದು, ಈ ಹೇಳಿಕೆ ವಿರೋಧಿಸಿ ನನ್ನನ್ನು ಎನ್ಕೌಂಟರ್ ಮಾಡಿ ಸಾಯಿಸಬೇಕು ಎಂದು ವ್ಯಕ್ತಿ ಒಬ್ಬ ಹೇಳಿದ್ದಾನೆ. ಆತನಿಗೆ ಅದರಿಂದ ತೃಪ್ತಿ ಸಿಗುವುದಾದರೆ ನನ್ನನ್ನು ಕೊಲ್ಲಲ್ಲಿ ಎಂದು ಹಿರಿಯ ಕಾಂಗ್ರೆಸ್ ಮುಖಂಡ, ಮಾಜಿ ಕೇಂದ್ರ ಸಚಿವ ಬಿ. ಜನಾರ್ದನ ಪೂಜಾರಿ ಹೇಳಿದ್ದಾರೆ.
ವೃದ್ಧಾಶ್ರಮದಲ್ಲಿ ಸೋನಿಯಾ ಗಾಂಧಿ ಜನ್ಮ ದಿನಾಚರಣೆಯ ಪ್ರಯುಕ್ತ ಹಣ್ಣು-ಹಂಪಲು ವಿತರಿಸಿದ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಅವರು, ನಾನು ರಾಮನನ್ನು ನಂಬಿ ಎಂದು ಹಿಂದುಗಳಿಗೆ, ಮೊಹಮ್ಮದ್ ಪೈಗಂಬರ್ ಅವರನ್ನು ನಂಬಿ ಎಂದು ಮುಸ್ಲಿಮರಿಗೆ, ಏಸುವನ್ನು ನಂಬಿ ಎಂದು ಕ್ರಿಶ್ಚಿಯನ್ರಿಗೆ ಹೇಳಿದ್ದು ತಪ್ಪಾ ಎಂದು ಪ್ರಶ್ನಿಸಿದರು.ನಾನು ರಾಮ ದೇವರನ್ನು, ಮುಹಮ್ಮದ್ ಪೈಗಂಬರ್ ಮತ್ತು ಏಸುವನ್ನು ದೇವರೆಂದು ನಂಬುತ್ತೇನೆ ಎಂದು ಹೇಳಿದರು.
ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಸಿದ್ಧನಿದ್ದೇನೆ. ಹೈಕಮಾಂಡ್ ಟಿಕೆಟ್ ನೀಡಿದರೆ ಮತ್ತೆ ಸ್ಪರ್ಧಿಸುತ್ತೇನೆ. ಪ್ರತಿ ದಿನ ರಾತ್ರಿ ನನಗೆ ಹೈಕಮಾಂಡ್ ಕಡೆಯ ವ್ಯಕ್ತಿಯೊಬ್ಬರು ಫೋನ್ ಮಾಡಿ ಇಲ್ಲಿನ ವಿದ್ಯಮಾನದ ಬಗ್ಗೆ ಮಾಹಿತಿ ಪಡೆಯುತ್ತಾರೆ. ಅದು ನನಗೆ ಖುಷಿ ಎಂದು ಅವರು ಹೇಳಿದರು.