[1]ಮಂಗಳೂರು : ಪಂಚ ರಾಜ್ಯಗಳಲ್ಲಿ ಬಿ.ಜೆ.ಪಿಯನ್ನು ಕೆತ್ತೆಸೆಯುವ ಮೂಲಕ ಮತದಾರರು ಬಿ.ಜೆ.ಪಿಗೆ ಸರಿಯಾದ ಬುದ್ಧಿ ಕಲಿಸಿದ್ದಾರೆ. ಹಣ ಮತ್ತು ತೋಳ್ಬಲ ಉಪಯೋಗಿಸಿಯೂ ಬಿ.ಜೆ.ಪಿಯು ದೇಶದಿಂದಲೇ ಕಣ್ಮರೆಯಾಗುವತ್ತ ಹೆಜ್ಜೆ ಇಟ್ಟಿದೆ. ನರೇಂದ್ರ ಮೋದಿ ಹಾಗೂ ಅಮಿತ್ ಷಾ ಈ ಫಲಿತಾಂಶದಿಂದ ಬುದ್ಧಿ ಕಲಿಯಬೇಕಾಗಿದೆ ಎಂದು ದ.ಕ ಜಿಲ್ಲಾ ಕಾಂಗ್ರೆಸ್ನ ಮಾಜಿ ಅಧ್ಯಕ್ಷರಾದ ಇಬ್ರಾಹಿಂ ಕೋಡಿಜಾಲ್ ಅವರ ನೇತೃತ್ವದಲ್ಲಿ ನಡೆದ ವಿಜಯೋತ್ಸವ ಆಚರಣೆಯಲ್ಲಿ ಅವರು ಅಭಿಪ್ರಾಯಗೈದರು.
ರಾಜಸ್ತಾನ, ಛತ್ತೀಸ್ಘಡ, ಮಧ್ಯಪ್ರದೇಶ, ಮಿಜೋರಾಮ್ ಹಾಗೂ ತೆಲಂಗಾಣ ರಾಜ್ಯಗಳ ಚುನಾವಣೆಗಳಲ್ಲಿ ಮೂರು ರಾಜ್ಯಗಳಲ್ಲಿ ಕಾಂಗ್ರೆಸ್ ವಿಜಯಿಯಾಗಿ, ಇನ್ನೆರಡು ರಾಜ್ಯಗಳಲ್ಲಿ ಬಿಜೆಪಿಯೇತರ ಪಕ್ಷಗಳು ಜಯಭೇರಿ ಸಾಧಿಸಿದ್ದು ಕಾಂಗ್ರೆಸ್ ಹಾಗೂ ವಿರೋಧ ಪಕ್ಷಗಳನ್ನು ಬೆಂಬಲಿಸಿ ರಾಷ್ಟ್ರೀಯ ಪಕ್ಷ ಬೆ.ಜೆ.ಪಿಗೆ ಮತದಾರರು ಬಲವಾದ ಹೊಡೆತ ನೀಡಿದ್ದಾರೆ. ಇದು 2019 ರ ಲೋಕಸಭಾ ಚುನಾವಣೆಯಲ್ಲಿ ಕೇಂದ್ರ ಸರಕಾರದ ಆಡಳಿತದಿಂದ ಕಿತ್ತೊಗೆಯಲು ಸರಿಯಾದ ವೇದಿಕೆ ನಿರ್ಮಿಸಿಕೊಟ್ಟಿದೆ. ರಾಹುಲ್ ಗಾಂಧಿಯವರು ರಾಷ್ಟ್ರೀಯ ಕಾಂಗ್ರೆಸ್ನ ಅಧ್ಯಕ್ಷತೆ ವಹಿಸಿಕೊಂಡ ಸರಿಯಾಗಿ ಒಂದು ವರ್ಷದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮುನ್ನಡೆ ದೊರಕಿಸಿ ಕೊಟ್ಟು ಕಾಂಗ್ರೆಸ್ ಮುಕ್ತ ಬೆದರಿಕೆಯನ್ನು ಒದ್ದು ಓಡಿಸಿ ಬಿ.ಜೆ.ಪಿಯ ಆಡಳಿತವನ್ನು ತೊಲಗಿಸಲು ವಿರೋಧಪಕ್ಷಗಳನ್ನೆಲ್ಲಾ ಒಟ್ಟುಗೂಡಿಸಿ ಮುಂದಡಿ ಇಟ್ಟಿರುವುದು ಈ ದೇಶದ ಅಭಿವೃದ್ಧಿ ಕಡೆಗೆ ಆಶಾದಾಯಕ ಬೆಳವಣಿಗೆ ಎಂದು ಅವರು ಅಭಿಪ್ರಾಯಪಟ್ಟರು. ಪಂಚ ರಾಜ್ಯಗಳ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿದ ಹಾಗೂ ಬಿ.ಜೆ.ಪಿಯ ಮೂರು ರಾಜ್ಯಗಳ ಆಡಳಿತವನ್ನು ಕಿತ್ತೆಸಿರುವುದನ್ನು ಬೆಂಬಲಿಸಿ, ದ.ಕ ಜಿಲ್ಲಾ ಕಾಂಗ್ರೆಸ್ ವಿಜಯಾಚರಣೆಯಲ್ಲಿ ಇಬ್ರಾಹಿಂ ಕೋಡಿಜಾಲ್ ಮಾತನಾಡಿದರು.
[2]ಈ ಪಂಚರಾಜ್ಯಗಳಲ್ಲಿ ಕಾಂಗ್ರೆಸ್ ಗೆದ್ದಿರುವ ರಾಜ್ಯಗಳ ವಿಜಯವು ರಾಹುಲ್ ಗಾಂಧಿಯವರ ಮುಖಂಡತ್ವಕ್ಕೆ ಜನತೆ ನೀಡಿರುವ ಮನ್ನಣೆಯಾಗಿದ್ದು, ಮುಂದಿನ ರಾಷ್ಟ್ರೀಯ ಚುನಾವಣೆಯಲ್ಲಿ ರಾಹುಲ್ ಗಾಂಧಿ ಪ್ರಧಾನಿಯಾಗುವತ್ತ ಮತ್ತೊಂದು ಹೆಜ್ಜೆಯಾಗಿದೆ ಎಂದು ದ.ಕ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಹೇಳಿದರು.
ಮಲ್ಲಿಕಟ್ಟೆಯಲ್ಲಿರುವ ಕಾಂಗ್ರೆಸ್ ಭವನದ ಮುಂಭಾಗದಲ್ಲಿ ವಿಜಯೋತ್ಸವ ಆಚರಿಸಿದ ಕಾಂಗ್ರೆಸ್ ನೇತಾರರು ಹಾಗೂ ಕಾರ್ಯಕರ್ತರು ಕಾಂಗ್ರೆಸ್ ಪಕ್ಷ ಹಾಗೂ ನೇತೃತ್ವಕ್ಕೆ ಮುನ್ನಡೆ ದೊರಕಿರುವುದಕ್ಕೆ ಹರ್ಷಪಟ್ಟು, ಸಿಹಿ ಹಂಚಿ ಪಟಾಕಿ ಸಿಡಿಸಿ ಹರ್ಷ ವ್ಯಕ್ತಪಡಿಸಿದರು. ಕಾಂಗ್ರೆಸ್ ನಾಯಕರುಗಳಾದ ಜೆ.ಆರ್ ಲೋಬೋ, ಶಶಿಧರ್ ಹೆಗ್ಡೆ, ಧನಂಜಯ ಅಡ್ಪಂಗಾಯ, ಸುರೇಶ್ ಬಳ್ಳಾಲ್, ಸದಾಶಿವ ಉಳ್ಳಾಲ್, ಶಾಹುಲ್ ಹಮೀದ್, ಎ.ಸಿ ವಿನಯರಾಜ್, ಬಿ.ಎ ಮಹಮ್ಮದ್ ಹನೀಫ್, ನವೀನ್ ಡಿ’ಸೋಜಾ, ಶಾಲೆಟ್ ಪಿಂಟೋ, ಅಬ್ದುಲ್ ರವೂಫ್, ದೀಪಕ್ ಪೂಜಾರಿ, ವಿಶ್ವಾಸ್ ಕುಮಾರ್ ದಾಸ್, ಸುಹೈಲ್ ಕಂದಕ್, ಮೆರಿಲ್ ರೇಗೋ, ಗಿರೀಶ್ ಆಳ್ವ, ಯು.ಟಿ ತೌಸೀಫ್, ಲಾರೆನ್ಸ್ ಡಿ’ಸೋಜಾ, ನಝೀರ್ ಬಜಾಲ್, ಕುಮಾರಿ ಅಪ್ಪಿ, ಬಿ.ಎಮ್ ಭಾರತಿ, ಖಾಲಿದ್ ಉಜಿರೆ, ಆಶಾ ಡಿ’ಸಿಲ್ವಾ, ಟಿ.ಕೆ ಸುಧೀರ್, ನೀರಜ್ಪಾಲ್, ಸವಾದ್ ಸುಳ್ಯ, ಶುಭೋದಯ ಆಳ್ವ, ಆರೀಫ್ ಬಾವ, ಬಿಲಾಲ್ ಮೊದಿನ್, ನಾಗವೇಣಿ, ಟಿ.ಕೆ ಶೈಲಜಾ, ರಮಾನಂದ ಪೂಜಾರಿ, ಎಸ್.ಕೆ ಸೌಹಾನ್, ಅನ್ಸಾರ್ ಸಾಲ್ಮಾರ್, ಸಿ.ಎಮ್ ಮುಸ್ತಫ, ನೂರುದ್ಧೀನ್ ಬಜಾಲ್, ಮುನೀರ್ ಎಚ್.ಎಸ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.