[1]ಚಾಮರಾಜನಗರ: ಸುಳ್ವಾಡಿ ಮಾರಮ್ಮ ದೇಗುಲ ಪ್ರಸಾದಕ್ಕೆ ಕೀಟನಾಶಕ ಹಾಕಿದ ಆರೋಪಿಗಳಲ್ಲಿ ಹಣದಾಸೆ, ಅಧಿಕಾರದ ಹುಚ್ಚು, ದ್ವೇಷ ಮತ್ತು ವಿವಾಹೇತರ ಸಂಬಂಧ ಜೊತೆಯಾಗಿತ್ತು ಎಂಬ ಅನೇಕ ವಿಷಯಗಳು ಹೊರಬರುತ್ತಿವೆ.
ಹೌದು, ಸಾಲೂರು ಮಠದ ಕಿರಿ ಸ್ವಾಮೀಜಿಯ ಹಣ – ಅಧಿಕಾರದ ಹುಚ್ಚು, ಪ್ಲಾನ್ ಕಾರ್ಯರೂಪಕ್ಕೆ ತರಲು ಸಹಾಯವಾದ ಸ್ವಾಮೀಜಿ ಮತ್ತು ಅಂಬಿಕಾಳ ಸಂಬಂಧ, ಮಹದೇಶ್ ಮತ್ತು ದೊಡ್ಡಯ್ಯಗಿದ್ದ ಟ್ರಸ್ಟ್ ಕಾರ್ಯದರ್ಶಿ ಚಿನ್ನಪ್ಪಿ ಮೇಲಿನ ದ್ವೇಷ 15 ಮಂದಿ ಭಕ್ತಾದಿಗಳ ಪ್ರಾಣವನ್ನು ತೆಗೆದಿದೆ.
ಸಾಲೂರು ಮಠದ ಹಿರಿ-ಕಿರಿ ಸ್ವಾಮೀಜಿ ಸಂಬಂಧ ತೀರಾ ಹದಗೆಗಟ್ಟಾಗ ಕನಕಪುರದ ಸ್ವಾಮೀಜಿಯೊಬ್ಬರು ಸಂಧಾನ ಮಾಡಿಸಿದ್ದರು. ಬಳಿಕ, 1.5 ಕೋಟಿ ರೂ. ವೆಚ್ಚದಲ್ಲಿ ಕಿರಿ ಸ್ವಾಮೀಜಿ ಗೋಪುರ ನಿರ್ಮಾಣಕ್ಕೆ ಸಿದ್ಧಪಡಿಸಿದ ನೀಲನಕ್ಷೆ ಮತ್ತು ಟ್ರಸ್ಟ್ ಆದದ್ದರಿಂದ ಹಣ ಲಪಟಾಯಿಸಲು ಆಗದಿದ್ದರಿಂದ ಕಾರ್ಯದರ್ಶಿ ಚಿನ್ನಪ್ಪಿ ಮೇಲೆ ಕಿರಿ ಸ್ವಾಮೀಜಿ ಅಗಾಧ ಸಿಟ್ಟು ಹೊಂದಿದ್ದರು ಎಂದು ಸುದ್ದಿಗೋಷ್ಠಿಯಲ್ಲಿ ಐಜಿಪಿ ಶರತ್ ಚಂದ್ರ ಮಾಹಿತಿ ನೀಡಿದರು. ಹೇಗಾದರೂ ಮಾಡಿ ಚಿನ್ನಪ್ಪಿ ಹಾಗೂ ಹಿರಿಯ ಸ್ವಾಮೀಜಿ ಮೇಲೆ ಕೆಟ್ಟ ಹೆಸರು ತಂದು ಹಣ ಮತ್ತು ಅಧಿಕಾರ ಅನುಭವಿಸಬೇಕೆಂಬ ಹುಚ್ಚಿಗೆ ಕಿರಿಯಶ್ರೀ ಬಿದ್ದಾಗ ಹುಟ್ಟಿಕೊಂಡದ್ದು ವಿಷಪ್ರಾಶನದ ಪ್ಲಾನ್.
ಕಿರಿ ಸ್ವಾಮೀಜಿ ಮತ್ತು ಅಂಬಿಕಾ ಹನೂರು ತಾಲೂಕಿನ ಹೂಗ್ಯಂ ಗ್ರಾಮದವರಾಗಿದ್ದು, ಮುಂಚಿನಿಂದಲೂ ವಿವಾಹೇತರ ಸಂಬಂಧ ಹೊಂದಿದ್ದರು ಎಂಬ ಆರೋಪಿಸಲಾಗುತ್ತಿದೆ. ಮಾದೇಶನೊಂದಿಗೆ ಮದುವೆಯಾದ ಬಳಿಕ ಅಂಬಿಕಾ ಮಠಕ್ಕೆ ಆಗಾಗ್ಗೆ ಬಂದು ಹೋಗುತ್ತಿದ್ದರಿಂದ ಅವರ ಸಂಬಂಧ ಮತ್ತಷ್ಟು ಗಟ್ಟಿಯಾಗಿತ್ತು. ಮನೆ ಮತ್ತು ದೇಗುಲದ ಮ್ಯಾನೇಜರ್ ಹುದ್ದೆ, ಕೇಳಿದಾಗ ಹಣ ಕೊಡುತ್ತಿದ್ದರಿಂದ ಪತಿ-ಪತ್ನಿ ಇಬ್ಬರೂ ಸ್ವಾಮೀಜಿ ಕೈಗೊಂಬೆಯಾಗಿದ್ದರು. ವಿಷ ಹಾಕಲು ಸಂಚು ನಡೆಸಿದ್ದ ಸ್ವಾಮೀಜಿಗೆ ಈ ಸಂಬಂಧ ಫಲ ಸಾಥ್ ನೀಡಿತು ಎನ್ನಲಾಗುತ್ತಿದೆ.
ಮಾರಮ್ಮನ ದೇಗುಲದ ಬಳಿ ಇರುವ ನಾಗಗುಡಿಗೆ ಪೂಜಾರಿಯಾಗಿದ್ದ ದೊಡ್ಡಯ್ಯ ಗಾಂಜಾ ಆರೋಪದ ಮೇಲೆ ಬಂಧಿತನಾದ್ದರಿಂದ ಕಾರ್ಯದರ್ಶಿ ಚಿನ್ನಪ್ಪಿ ಅವರು ದೊಡ್ಡಯ್ಯನನ್ನು ಪೂಜಾರಿ ಕೆಲಸದಿಂದ ದೂರವಿಟ್ಟಿದ್ದರು. ಇದರಿಂದ, ದ್ವೇಷ ಕಟ್ಟಿಕೊಂಡಿದ್ದ ದೊಡ್ಡಯ್ಯ ಕೃಷಿ ಅಧಿಕಾರಿ ಸಹಾಯದಿಂದ ಅಂಬಿಕಾ ತರಿಸಿದ್ದ ಕ್ರಿಮಿನಾಶಕವನ್ನು ಸೇರಿಸುವ ಮೂಲಕ ಈ ತಂಡ ವಿಷ ಕಕ್ಕಿದ್ದರು.
ಈ ಪ್ರಕರಣದಲ್ಲಿ ಕೃಷಿ ಅಧಿಕಾರಿ ಐ ವಿಟ್ನೆಸ್ ಎನ್ನಲಾಗುತ್ತಿದೆ. ಪೊಲೀಸರು ನಾಲ್ಕೂವರೆ ದಿನಗಳಲ್ಲೇ ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ.