[1]ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ರಥಯಾತ್ರೆ ಆಯೋಜಿಸುವ ಕುರಿತಾಗಿ ಬಿಜೆಪಿ ಹಾಗೂ ರಾಜ್ಯ ಸರ್ಕಾರದ ಹಗ್ಗಜಗ್ಗಾಟ ಮುಂದುವರೆದಿದೆ. ಬಿಜೆಪಿ ರಥಯಾತ್ರೆ ಆಯೋಜನೆಗೆ ಅವಕಾಶ ನೀಡಿರುವ ತೀರ್ಪಿನ್ನು ಪ್ರಶ್ನಿಸಿ ಬಂಗಾಳ ಸರ್ಕಾರ ಮೇಲ್ಮನವಿ ಸಲ್ಲಿಸಲು ಮುಂದಾಗಿದೆ.
ನಿನ್ನೆ ಕೋಲ್ಕತ್ತಾ ಹೈಕೋರ್ಟಿನ ಏಕಸದಸ್ಯ ಪೀಠವು ಬಿಜೆಪಿ ರಥಯಾತ್ರೆಗೆ ಅವಕಾಶ ನೀಡಿ ತೀರ್ಪು ನೀಡಿತ್ತು. ಇದನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಹೈಕೋರ್ಟ್ನ ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿದೆ. ಮುಖ್ಯನಾಯಮೂರ್ತಿ ದೆಬಸಿಶ್ ಕರ್ಗುಪ್ತ ಹಾಗೂ ನ್ಯಾ. ಶಂಪ ಸರ್ಕಾರ ಅವರ ಪೀಠದ ಎದುರು ಮೇಲ್ಮನವಿ ಸಲ್ಲಿಸಿರುವ ಸರ್ಕಾರ, ಈ ಬಗ್ಗೆ ತುರ್ತು ವಿಚಾರಣೆ ಕೈಗೊಳ್ಳುವಂತೆ ಕೋರಿದೆ. ಇದಕ್ಕೆ ಸಮ್ಮತಿ ಸೂಚಿಸಿರುವ ಪೀಠ, ಅಗತ್ಯ ದಾಖಲೆಗಳನ್ನು ಸಲ್ಲಿಸುವಂತೆ ಹೇಳಿದೆ. ಅಲ್ಲದೆ, ಬಿಜೆಪಿಯ ವಿಚಾರಣೆ ಸಹ ನಡೆಯಲಿದೆ ಎಂದು ತಿಳಿದುಬಂದಿದೆ.
ರಥಯಾತ್ರೆ ಕೋಮು ಗಲಭೆಗೆ ಕಾರಣವಾಗಲಿದೆ ಸರ್ಕಾರದ ಹಿರಿಯ ಅಧಿಕಾರಿಗಳು ಬಿಜೆಪಿ ಕೋರಿಕೆಯನ್ನು ತಿರಸ್ಕಾರ ಮಾಡಿದ್ದರು. ಇದರಿಂದ ಬಿಜೆಪಿ ಕೋರ್ಟ್ ಮೆಟ್ಟಿಲೇರಿತ್ತು. ಈವರೆಗೆ ಎರಡೂ ಕಡೆಯಿಂದ ಜಟಾಪಟಿ ಮುಂದುವರೆಯುತ್ತಲೆ ಇದೆ.