[1]ಮಂಗಳೂರು : ಅವಳಿ ಮಕ್ಕಳನ್ನು ನೇಣಿಗೆ ಹಾಕಿ ಮಹಿಳೆಯೊಬ್ಬಳು ತಾನೂ ಆತ್ಮಹತ್ಯೆಗೆ ಶರಣಾದ ದಾರುಣ ಘಟನೆ ನಗರದಲ್ಲಿ ನಡೆದಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಉಜಿರೆ-ಬೆಳಾಲು ರಸ್ತೆಯ ಓಡಲದ ಬಾಡಿಗೆ ಮನೆಯಲ್ಲಿ ವಾಸವಿದ್ದ ಶಿವಮೊಗ್ಗ ಮೂಲದ ಮಹಿಳೆ ಬೇಬಿ (23) ಸಾವನ್ನಪ್ಪಿದ್ದವರು. ಇನ್ನು ಅಸ್ವಸ್ಥರಾಗಿದ್ದ ಎರಡು ವರ್ಷ ಪ್ರಾಯದ ಅವಳಿ ಮಕ್ಕಳಾದ ಅಕ್ಷರ ಹಾಗೂ ಅಪ್ಪರಾ ಅವರನ್ನು ಮಂಗಳೂರಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಬೇಬಿ ಅವರ ಗಂಡ ಪ್ರವೀಣ್ ಉಜಿರೆಯ ಸಲೂನ್ ಒಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ನಿನ್ನೆ ರಾತ್ರಿ ಮನೆಗೆ ಬಂದಾಗ ಪತ್ನಿ ಹಾಗೂ ಮಕ್ಕಳು ನೇಣು ಬಿಗಿದುಕೊಂಡಿರುವುದನ್ನು ನೋಡಿದ್ದಾರೆ. ತಕ್ಷಣವೇ ಎಚ್ಚೆತ್ತು ಪತ್ನಿ ಹಾಗೂ ಮಕ್ಕಳನ್ನು ನೇಣಿನಿಂದ ಕೆಳಗಿಳಿಸಿದ್ದಾರೆ. ದುರದೃಷ್ಟವಶಾತ್ ಪತ್ನಿ ಅದಾಗಲೇ ಸಾವಿಗೀಡಾಗಿದ್ದಳು.
ಮಹಿಳೆಯ ಸಹೋದರ ಈ ಬಗ್ಗೆ ದೂರು ನೀಡಿದ್ದು, ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.