ಪುತ್ತೂರು : ವಿವೇಕಾನಂದ ಕಾನೂನು ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಮತ್ತು ಸ್ವೀಪ್ನ ಸಹಯೋಗದಲ್ಲಿ ಮತದಾನ ಮತ್ತು ವಿದ್ಯುನ್ಮಾನ ಮತಯಂತ್ರದ ಕುರಿತು ಮಾಹಿತಿ ಕಾರ್ಯಕ್ರಮವು ಕಾನೂನು ಕಾಲೇಜಿನ ಸಭಾಂಗಣದಲ್ಲಿ ಮಾರ್ಚ್ 8 ರಂದು ಜರಗಿತು.
ಕಾರ್ಯಕ್ರಮದಲ್ಲಿ ಪುತ್ತೂರಿನ ಸಹಾಯಕ ಕಮಿಷನರ್ ಆಗಿರುವ ಶ್ರೀ ಎಚ್.ಕೆ ಕೃಷ್ಣಮೂರ್ತಿ ಮುಖ್ಯ ಅತಿಥಿಯಾಗಿ ಮಾತನಾಡಿ ಚುನಾವಣೆಯಲ್ಲಿ ಮತದಾನ ಮಾಡುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದ್ದು, ನಾವು ಮತದಾನ ಮಾಡುವುದರ ಜತೆಗೆ ಇತರರಲ್ಲೂ ಮತದಾನ ಮಾಡುವ ಕುರಿತು ಜಾಗೃತಿ ಮೂಡಿಸಬೇಕು ಎಂದರು. ನಂತರ ಅವರು ವಿದ್ಯುನ್ಮಾನ ಮತಯಂತ್ರದ ಕುರಿತು ಮಾಹಿತಿ ನೀಡುತ್ತಾ, ಈ ಯಂತ್ರವನ್ನು ಅತ್ಯಾಧುನಿಕ ತಂತ್ರಜ್ನಾನವನ್ನು ಬಳಸಿ ತಯಾರಿಸಿದ್ದು, ಇದನ್ನು ಯಾರಿಂದಲೂ ದುರುಪಯೋಗಪಡಿಸಲು ಸಾಧ್ಯವಿಲ್ಲ ಎಂದು ಹೇಳುತ್ತಾ ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಉತ್ತರಿಸಿದರು. ನಂತರ ವಿದ್ಯಾರ್ಥಿಗಳಿಗೆ ವಿದ್ಯುನ್ಮಾನ ಮತಯಂತ್ರದ ಮೂಲಕ ಮತಹಾಕುವ ವಿಧಾನವನ್ನು ಪ್ರಾತ್ಯಕ್ಷಿತೆಯ ಮೂಲಕ ತೋರಿಸಿ ಕೊಡಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಕಾನೂನು ಅಧ್ಯಯನ ವಿಭಾಗದ ನಿರ್ದೇಶಕರಾದ ಡಾ. ಬಿ.ಕೆ ರವೀಂದ್ರ ಇವರು ವಹಿಸಿದ್ದರು. ವೇದಿಕೆಯಲ್ಲಿ ಪುತ್ತೂರಿನ ತಹಶೀಲ್ದಾರರಾದ ಡಾ. ಪ್ರದೀಪ ಕುಮಾರ್, ನುರಿತ ವಿದ್ಯುನ್ಮಾನ ಮತಯಂತ್ರ ತರಬೇತುದಾರರಾದ ಶ್ರೀ ಪ್ರಶಾಂತ್ ನಾಯಕ್, ಕಾನೂನು ಕಾಲೇಜಿನ ಪ್ರಾಂಶುಪಾಲರಾದ ಶ್ರೀ ರಾಜೇಂದ್ರ ಪ್ರಸಾದ್ ಎ. ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾಲೇಜಿನ ಉಪನ್ಯಾಸಕ ಮತ್ತು ಉಪನ್ಯಾಸಕೇತರ ವರ್ಗದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
Click this button or press Ctrl+G to toggle between Kannada and English