- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಧರ್ಮಸ್ಥಳ ಕೆಎಸ್ಆರ್​ಟಿಸಿ ಬಸ್ ಡಿಪೋದಲ್ಲಿ ಮೂರು ಸಿಬ್ಬಂದಿ ಸಾವು

Ksrtc-Dharmasthala [1]ಧರ್ಮಸ್ಥಳ: ಕೆಎಸ್ಆರ್ಟಿಸಿ ಬಸ್ ಡಿಪೋದ ರೆಸ್ಟ್ ರೂಂನಲ್ಲಿ ಚಾಲಕ-ನಿರ್ವಾಹಕರೋರ್ವರು ಮಲಗಿದ್ದಲ್ಲೇ ಮೃತಪಟ್ಟ ಘಟನೆ  ಸೋಮವಾರ  ನಡೆದಿದೆ.

ವಿಜಾಪುರದ ನಿವಾಸಿ ಸುರೇಶ್ ಬಡಿಗೇರ್(45) ಮೃತಪಟ್ಟವರು. ಅನಾರೋಗ್ಯದಿಂದ ಬಳಲುತ್ತಿದ್ದ ಅವರು ರಜೆ ಕೇಳಿದರೂ, ಹೆಚ್ಚುವರಿಯಾಗಿ ದುಡಿಸಿಕೊಂಡ ಕಾರಣ ತೀವ್ರ ಕಾಯಿಲೆಗೆ ಒಳಗಾಗಿ ಮೃತಪಟ್ಟಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ. ಧರ್ಮಸ್ಥಳ ಕೆಎಸ್ಆರ್ಟಿಸಿ ಬಸ್ ಡಿಪೋ ಹಲವಾರು ಹಗರಣ, ಅವ್ಯವಹಾರಗಳ ಆಗರವಾಗಿದೆ. ಒಂದೇ ವಾರದಲ್ಲಿ ಇಲ್ಲಿನ ಮೂವರು ಸಿಬ್ಬಂದಿ ಮೃತಪಟ್ಟಿದ್ದು, ಡಿಪೋದಲ್ಲಿರುವ ಅಧಿಕಾರಿಗಳು ನೀಡುವ ಮಾನಸಿಕ ಕಿರುಕುಳವೇ ಈ ಸಾವುಗಳಿಗೆ ಕಾರಣ ಎಂಬ ಆರೋಪಗಳು ಕೇಳಿ ಬರುತ್ತಿವೆ.

ಈ ಬಗ್ಗೆ ಉನ್ನತಮಟ್ಟದ ತನಿಖೆ ನಡೆಸಬೇಕಾಗಿದೆ ಎಂದು ಸಿಐಟಿಯು ಬೆಳ್ತಂಗಡಿ ತಾಲೂಕು ಸಮಿತಿಯು ಆಗ್ರಹಿಸಿದೆ‌. ಕಳೆದ ವಾರದಲ್ಲಿ ಕೆಎಸ್ಆರ್ಟಿಸಿ ಬಸ್ ಚಾಲಕರಾಗಿರುವ ಇಲ್ಲಿನ ಸಿಬ್ಬಂದಿ ಗದಗ್‌ನ ಜಗದೀಶ್ ಹಾಗೂ ಕ್ಲೀನರ್ ಶಿವಮೊಗ್ಗದ ಮಂಜುನಾಥ ಎಂಬವರು ಮೃತಪಟ್ಟಿದ್ದು, ಇದಕ್ಕೆ ಡಿಪೋದ ಅವ್ಯವಸ್ಥೆಯೇ ಕಾರಣ. ಕಳೆದ ವರ್ಷ ಇಲ್ಲಿನ ಅವ್ಯವಸ್ಥೆಗಳ ಬಗ್ಗೆ ಸಿಬ್ಬಂದಿ ವಿಡಿಯೋ ಚಿತ್ರೀಕರಣ ಮಾಡಿ, ಮೇಲಧಿಕಾರಿಗಳಿಗೆ ದೂರು ನೀಡಿದರೂ, ಆ ಬಗ್ಗೆ ಯಾವುದೇ ಕ್ರಮಕೈಗೊಂಡಿಲ್ಲ. ಅಲ್ಲದೆ ಸಿಬ್ಬಂದಿಯನ್ನೇ ಆರೋಪಿ ಸ್ಥಾನದಲ್ಲಿರಿಸಿ ಅಮಾನತು ಮಾಡಲಾಯಿತು ಎನ್ನಲಾಗಿದೆ.

ಸಿಬ್ಬಂದಿಗೆ ಅಗತ್ಯವಿರುವ ರಜೆಗಳನ್ನು ನೀಡದೆ, ಅನಾರೋಗ್ಯವಿದ್ದಾಗಲೂ ದುಡಿಸಲಾಗುತ್ತದೆ. ಆದ್ದರಿಂದ ಒಂದೇ ವಾರದಲ್ಲಿ ಮೂರು ಸಿಬ್ಬಂದಿ ಸಾವನ್ನಪ್ಪಿದ್ದು, ಈ ಬಗ್ಗೆ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥ ಅಧಿಕಾರಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕೆಂದು ಸಿಐಟಿಯು ಬೆಳ್ತಂಗಡಿ ತಾಲೂಕು ಸಮಿತಿ ಆಗ್ರಹಿಸಿದೆ.